ಅರ್ಜುನ್ ಸರ್ಜಾ 150ನೆ ಚಿತ್ರ "ವಿಸ್ಮಯ"ದ ಹಾಡುಗಳ ಬಿಡುಗಡೆ
ಬೆಂಗಳೂರು, ಜೂ.21: ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಟನೆಯ 150ನೇ ಚಿತ್ರ 'ವಿಸ್ಮಯ'ದ ಹಾಡುಗಳ ಬಿಡುಗಡೆ ಕಾರ್ಯಕ್ರಮ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಜರಗಿತು.
ತಮ್ಮ 150ನೆ ಚಿತ್ರದ ಬಗ್ಗೆ ಮಾತನಾಡಿದ ಅರ್ಜುನ್ ಸರ್ಜಾ, ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳಿಗೆ ಯಾವುದೇ ಕೊರತೆಯಿಲ್ಲ. ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿದ್ದರೂ ಇದೊಂದು ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ. ಚಿತ್ರದ ನಿರ್ದೇಶಕರಿಂದ ಪ್ಲ್ಯಾನಿಂಗ್ ಹಾಕುವುದು ಹೇಗೆ ಎಂದು ಕಲಿತೆ. ಸುಧಾರಾಣಿ, ಸುಹಾಸಿನಿ ಮೊದಲಾದವರು ನಟಿಸಿದ್ದಾರೆ. ನಟ ಪ್ರಸನ್ನರ ಡೆಡಿಕೇಶನ್ ನೋಡಿ ಮೆಚ್ಚಿದೆ. ನನಗೆ ಕೂಡ ಹೊಸ ಅನುಭವ ನೀಡಿದ ಚಿತ್ರವಿದು. ನಿಜ ಹೇಳಬೇಕೆಂದರೆ 150ನೇ ಚಿತ್ರ ಎಂದು ಅರಿವಾಗಿದ್ದೇ ಲೆಕ್ಕ ಹಾಕಿದಾಗ ಎಂದರು.
ಅರುಣ್ ನಿರ್ದೇಶನದ ವಿಸ್ಮಯಕ್ಕೆ ಆನಂದ್ ರಾಘವ್ ಚಿತ್ರಕತೆಗಾರರಾಗಿದ್ದು ಅರವಿಂದ ಕೃಷ್ಣ ಛಾಯಾಗ್ರಾಹಕರು. ಚಿತ್ರವನ್ನು ಕನ್ನಡ ಸೇರಿದಂತೆ ತಮಿಳು ಭಾಷೆಯಲ್ಲಿಯೂ ಏಕಕಾಲದಲ್ಲಿ ಚಿತ್ರೀಕರಿಸಲಾಗಿದ್ದು, ಜುಲೈ 7ರಂದು ಬಿಡುಗಡೆಗೊಳಿಸುವ ಯೋಜನೆ ಹಾಕಲಾಗಿದೆ.
ಉಮೇಶ್, ಸೂಧನ್ ಸುಂದರಮ್, ಜಯರಾಮ್, ಅರುಣ್ ವೈದ್ಯನಾಥನ್ ಸೇರಿ ನಿರ್ಮಿಸಿರುವ ಚಿತ್ರದಲ್ಲಿ ಸುಧಾರಾಣಿ, ಸುಹಾಸಿನಿ ಮೊದಲಾದವರು ನಟಿಸಿದ್ದಾರೆ. ತೆಲುಗು ಭಾಷೆಯಲ್ಲಿ "ಕುರುಕ್ಷೇತ್ರಂ" ಹೆಸರಿನಲ್ಲಿ ಡಬ್ ಮಾಡಿ ಈ ಚಿತ್ರ ಬಿಡುಗಡೆಯಾಗಲಿದೆ. ಎಸ್. ನವೀನ್ ಸಂಗೀತ ನಿರ್ದೇಶನದ ಚಿತ್ರದಲ್ಲಿ ಮೂರು ಹಾಡುಗಳಿವೆ. 'ಕಬಾಲಿ' ಚಿತ್ರದ 'ನೆರುಪ್ಪಡ' ಗೀತೆ ಖ್ಯಾತಿಯ ಅರುಣ್ ರಾಜ್ ಸೇರಿದಂತೆ 'ರಾಮಾರಾಮಾ ರೇ' ಖ್ಯಾತಿಯ ವಾಸುಕಿ ವೈಭವ್ ಹಾಡುಗಳಿಗೆ ದನಿಯಾಗಿದ್ದಾರೆ.