ಲಾಲೇಟನ್ ಪುತ್ರ ಪ್ರಣವ್ ಬೆಳ್ಳಿತೆರೆಗೆ
ಸುದೀರ್ಘ ಸಮಯದಿಂದ ಮಲಯಾಳಂ ಚಿತ್ರರಸಿಕರ ಬಹುಕಾಲದ ನಿರೀಕ್ಷೆ ಇನ್ನೇನು ಈಡೇರುವ ದಿನಗಳು ಹತ್ತಿರವಾಗಿವೆ. ಹೌದು. ಮೋಹನ್ಲಾಲ್ ಪುತ್ರ ಪ್ರಣವ್ ಬೆಳ್ಳಿತೆರೆಗೆ ಪದಾರ್ಪಣೆ ಮಾಡುವುದು ಇದೀಗ ಕನ್ಫರ್ಮ್ ಆಗಿದೆ. ದೃಶ್ಯಂ ಖ್ಯಾತಿಯ ನಿರ್ದೇಶಕ ಜಿತು ಜೋಸೆಫ್, ಪ್ರಣವ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ‘ಆದಿ’ ಎಂದು ಹೆಸರಿಡಲಾದ ಈ ಚಿತ್ರಕ್ಕೆ ‘ಸಮ್ ಲೈಸ್ ಕ್ಯಾನ್ ಬಿ ಡೆಡ್ಲಿ’ (ಕೆಲವು ಸುಳ್ಳುಗಳು ಮಾರಣಾಂತಿಕವಾಗಬಲ್ಲವು) ಎಂಬ ಟ್ಯಾಗ್ಲೈನ್ ಕೂಡಾ ಇಡಲಾಗಿದೆ.
ಆಶೀರ್ವಾದ್ ಬ್ಯಾನರ್ನಲ್ಲಿ ಆ್ಯಂಟನಿ ಪೆರುಂಬವೂರ್ ನಿರ್ಮಿಸುತ್ತಿರುವ ಈ ಚಿತ್ರದ ಫಸ್ಟ್ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ. ಜೀತುಜೋಸೆಫ್ ನಿರ್ದೇಶನದ ಒಂಬತ್ತನೆ ಚಿತ್ರ ಇದಾಗಿದೆ. ತನ್ನ ಈ ಮೊದಲಿನ ಎಂಟು ಚಿತ್ರಗಳಿಗಿಂತ ಹತ್ತು ಪಟ್ಟು ಹೆಚ್ಚಿನ ಪರಿಶ್ರಮವನ್ನು ಈ ಚಿತ್ರಕ್ಕಾಗಿ ಸುರಿಯಲಿರುವುದಾಗಿ ಜಿತು ಜೋಸೆಫ್ ಹೇಳುತ್ತಾರೆ. ಈಗ ತಾನೆಲ್ಲಿ ಹೋದರೂ ಆದಿ ಚಿತ್ರದ ಕುರಿತ ಪ್ರಶ್ನೆಗಳೇ ತನ್ನೆದುರು ಕೇಳಲಾಗುತ್ತಿದೆಯೆಂದು ಜಿತು ಹೇಳುತ್ತಾರೆ. ಚಿತ್ರರಸಿಕರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲವೆಂಬ ಭರವಸೆಕೂಡಾ ಅವರು ಹೊಂದಿದ್ದಾರೆ. ಹಾಗೆ ನೋಡಿದರೆ, ಪ್ರಣವ್ಗೆ ಅಭಿನಯ ಹೊಸದೇನಲ್ಲ. ಈ ಹಿಂದೆ ಅವರು ಪುನರ್ಜನಿ ಎಂಬ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಈ ಚಿತ್ರದ ಅಭಿನಯಕ್ಕಾಗಿ ಕೇರಳದ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ಕೂಡಾ ಪಡೆದಿದ್ದರು. ತಂದೆ ಮೋಹನ್ಲಾಲ್ ಜೊತೆ ಓಣಾಮನಿ ಎಂಬ ಚಿತ್ರದಲ್ಲಿಯೂ ಪ್ರಣವ್ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದ್ದರು. ಈ ಮಧ್ಯೆ ಪ್ರಣವ್ , ಜಿತು ಜೋಸೆಫ್ ಅವರ ಪಾಪನಾಶನಂ, ಲೈಫ್ ಆಫ್ ಜೋಸುಟ್ಟಿಯಲ್ಲಿ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದರು. ಒಟ್ಟಿನಲ್ಲಿ ತಂದೆಯಂತೆ ಪ್ರಣವ್ ಕೂಡಾ ಮಲಯಾಳಂ ಪ್ರೇಕ್ಷಕರ ಕಣ್ಮಣಿಯಾಗಿ ಮೆರೆಯಲಿದ್ದಾರೆಯೇ ಎಂಬುದನ್ನು ಇಡೀ ಚಿತ್ರರಂಗ ಕಾತರದಿಂದ ಕಾಯುತ್ತಿದೆ.