‘ಕುರುಕ್ಷೇತ್ರ’ಕ್ಕೆ ಸೋನು ಸೂದ್
ಸ್ಯಾಂಡಲ್ವುಡ್ನ ಮೆಗಾಬಜೆಟ್ ಚಿತ್ರ ‘ಕುರುಕ್ಷೇತ್ರ’ಕ್ಕೆ ಇನ್ನೋರ್ವ ಬಹುಭಾಷಾ ನಟ ಸೇರ್ಪಡೆಯಾಗಿದ್ದಾರೆ. ಬಾಲಿವುಡ್ ಹಾಗೂ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಖಳನಾಯಕ ಪಾತ್ರಗಳಲ್ಲಿ ಮಿಂಚಿರುವ ಸೋನು ಸೂದ್ ಅವರು ದರ್ಶನ್ ನಾಯಕನಾಗಿರುವ ಈ ಚಿತ್ರದಲ್ಲಿ ನಟಿಸು ವುದು ಈಗ ಖಚಿತವಾಗಿದೆ. ಮಹಾಭಾರತದ ಕಥಾವಸ್ತುವನ್ನು ಹೊಂದಿರುವ ಈ ಚಿತ್ರದಲ್ಲಿ ಸೋನು ಸೂದ್ ಅರ್ಜುನನಾಗಿ ವಿಜೃಂಭಿಸಲಿದ್ದಾರೆ. ‘ಕುರುಕ್ಷೇತ್ರ’ ಸೋನುಸೂದ್ ಅವರ ಮೊದಲ ಕನ್ನಡ ಚಿತ್ರವಾಗಲಿದೆ.
ಮೊತ್ತ ಮೊದಲ ಬಾರಿಗೆ ಪೌರಾಣಿಕ ಪಾತ್ರವೊಂದರಲ್ಲಿ ನಟಿಸುವ ಅವಕಾಶ ದೊರೆತಿರುವುದು ಸೋನುಸೂದ್ಗೆ ತುಂಬಾ ಖುಷಿಕೊಟ್ಟಿದೆಯಂತೆ. ಅರ್ಜುನನ ಪಾತ್ರಕ್ಕೆ ನ್ಯಾಯ ಸಲ್ಲಿಸಲು ತಾನು ಸಾಕಷ್ಟು ಶ್ರಮಿಸುವುದಾಗಿ ಆತ ಹೇಳಿದ್ದಾರೆ.
ದುರ್ಯೋಧನ ಕೇಂದ್ರಪಾತ್ರವಾಗಿರುವ ‘ಕುರುಕ್ಷೇತ್ರ’ ಚಿತ್ರವು ಮಹಾ ಭಾರತವನ್ನು ಭಿನ್ನದೃಷ್ಟಿಕೋನದಲ್ಲಿ ಪ್ರೇಕ್ಷಕರ ಮುಂದಿಡಲಿದೆ. ಚಿತ್ರದಲ್ಲಿ ದರ್ಶನ್ ದುರ್ಯೋನನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದ್ರೌಪದಿಯಾಗಿ ಸ್ನೇಹಾ ನಟಿಸುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ ಖ್ಯಾತಿಯ ನಾಗಣ್ಣ ನಿರ್ದೇಶನದ ಈ ಚಿತ್ರದ ಶೂಟಿಂಗ್ ಪ್ರಸ್ತುತ ಹೈದರಾಬಾದ್ನಲ್ಲಿ ಭರದಿಂದ ಸಾಗುತ್ತಿದೆ.
ಮಹಾಭಾರತ ಯುದ್ಧದ ದೃಶ್ಯಗಳು ‘ಕುರುಕ್ಷೇತ್ರ’ದ ಹೈಲೈಟ್ ಆಗಲಿದ್ದು, ಬಾಹುಬಲಿ ಚಿತ್ರದ ಗ್ರಾಫಿಕ್ಸ್ ತಂಡ ಹಾಗೂ ಸಾಹಸ ನಿರ್ದೇಶಕರನ್ನೂ ಚಿತ್ರಕ್ಕಾಗಿ ಕರೆತರಲಾಗಿದೆ.