ವಿಲನ್ ಆಗಲಿರುವ ವಿಜಯ್
‘ಇಳಯದಳಪತಿ’ ವಿಜಯ್ ಚಿತ್ರರಂಗ ಪ್ರವೇಶಿಸಿ, 25 ವರ್ಷ ತುಂಬಿದೆ. ಈ ಸುಸಂದರ್ಭದಲ್ಲಿ ವಿಜಯ್ ತನ್ನ ಅಭಿಮಾನಿಗಳಿಗೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅದೇನೆಂದರೆ ಅವರು ವಿಲನ್ ಆಗುತ್ತಿದ್ದಾರೆ. ‘ಗಜನಿ’ ನಿರ್ದೇಶಕ ಎ.ಆರ್. ಮುರುಗದಾಸ್ ತಮಿಳು, ತೆಲುಗಿನಲ್ಲಿ ಆ್ಯಕ್ಷನ್ಕಟ್ ಹೇಳಲಿರುವ ಚಿತ್ರದಲ್ಲಿ ಅವರು ಖಳನಾಯಕನಾಗಿ ಮಿಂಚಲಿದ್ದಾರೆ. ಆದರೆ ಚಿತ್ರದ ತೆಲುಗು ಆವೃತ್ತಿಯಲ್ಲಿ ಮಾತ್ರ ಅವರು ವಿಲನ್ ಆಗಲಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ನಾಯಕನಾಗಲಿದ್ದಾರೆ. ಅದೇ ರೀತಿ ಚಿತ್ರದ ತಮಿಳು ಆವೃತ್ತಿಯಲ್ಲಿ ವಿಜಯ್ ಹೀರೋ ಆಗಲಿದ್ದು, ಪ್ರಿನ್ಸ್ ಮಹೇಶ್ಬಾಬು ವಿಲನ್. ಒಟ್ಟಿನಲ್ಲಿ ಈ ಇಬ್ಬರೂ ಸೂಪರ್ಸ್ಟಾರ್ಗಳು ವಿಲನ್ ಆಗುತ್ತಿರುವುದು ಚಿತ್ರಪ್ರೇಮಿಗಳ ಎದೆಬಡಿತವನ್ನು ಹೆಚ್ಚಿಸಿದೆ.
ಮುರುಗದಾಸ್ರಿಂದ ಚಿತ್ರದ ಆನ್ಲೈನ್ ಸ್ಟೋರಿ ಕೇಳಿದ ಕೂಡಲೇ ವಿಜಯ್ ಮರುಮಾತಿಲ್ಲದೆ ವಿಲನ್ ಆಗಲು ಒಪ್ಪಿ ಕೊಂಡರಂತೆ. ಇತ್ತೀಚೆಗೆ ತೆರೆಕಂಡ ಮುರುಗದಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಶನ್ನ ‘ಸ್ಪೈಡರ್ಮ್ಯಾನ್’ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಂದಹಾಗೆ ವಿಜಯ್ ಕೂಡಾ ಈ ಮೊದಲು ಮುರುಗದಾಸ್ ನಿರ್ದೇಶನದ ‘ತುಪಾಕಿ’, ‘ಕತ್ತಿ’ಯಂತಹ ಸೂಪರ್ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ದೀಪಾವಳಿಗೆ ವಿಜಯ್ ಅಭಿನಯದ ‘ಮೆರ್ಸಲ್’ ಬಿಡುಗಡೆಗೊಳ್ಳಲಿರುವುದು ಖಚಿತವಾಗಿದೆ. ಅದೇ ರೀತಿ ಅಟ್ಲಿ ಕುಮಾರ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಖ್ಯಾತ ನಟಿಯರಾದ ಕಾಜಲ್ ಅಗರ್ವಾಲ್, ಸಮಂತಾ, ನಿತ್ಯಾ ಮೆನನ್ ನಾಯಕಿಯರು.