ಪ್ರವಾದಿ ಮುಹಮ್ಮದ್(ಸ.) ಕರುಣೆಯ ಆಗರ: ಎ.ಪಿ. ಉಸ್ತಾದ್
ಶಾರ್ಜಾ: ಕೆಸಿಎಫ್ನಿಂದ ಯುಎಇ ರಾಷ್ಟ್ರೀಯ ದಿನಾಚರಣೆ, ಮೆಹ್ಫಿಲೇ ಮುಸ್ತಫ ಕಾರ್ಯಕ್ರಮ
ಶಾರ್ಜಾ, ಡಿ.6: ಪ್ರವಾದಿ ಮುಹಮ್ಮದ್(ಸ.) ವಿಶ್ವ ಕಂಡ ಅಪ್ರತಿಮ ಜನನಾಯಕರಾಗಿದ್ದು, ಅವರು ಕಾರುಣ್ಯದ ಸಾಕಾರ ಮೂರ್ತಿ. ವಿಶ್ವ ಶಾಂತಿಗಾಗಿ ಅವರು ಅನುಸರಿಸಿದ ಮಾರ್ಗ ಎಲ್ಲರಿಗೂ ಮಾದರಿ ಎಂದು ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಶಾರ್ಜಾ ವಲಯದ ವತಿಯಿಂದ ಇಲ್ಲಿನ ಇಬ್ನ್ ಸೀನಾ ಇಂಗ್ಲಿಷ್ ಸ್ಕೂಲ್ನಲ್ಲಿ ಇತ್ತೀಚೆಗೆ ನಡೆದ ಯುಎಇಯ 46ನೇ ರಾಷ್ಟ್ರೀಯ ದಿನಾಚರಣೆ ಹಾಗೂ ಮೆಹ್ಫಿಲೇ ಮುಸ್ತಫ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಅದಿನ್ ವಿದ್ಯಾಸಂಸ್ಥೆಯ ಅಧ್ಯಕ್ಷ ಅಸ್ಸೈಯದ್ ಖಲೀಲುಲ್ ಬುಖಾರಿ ತಂಙಳ್ ದುಆಗೈದು ಸಾಂದರ್ಭಿಕವಾಗಿ ಮಾತನಾಡಿದರು. ಹಾಶಿಂ ರಿಹಾನ್ ತೆಕ್ಕಾರ್ ಶಾರ್ಜಾ ಹಾಗೂ ಮುಹಮ್ಮದ್ ಹಾದಿ ಯುಎಇ ರಾಷ್ಟ್ರಗೀತೆ ಹಾಡಿದರು.
ಮರ್ಕಝ್ ವಿದ್ಯಾಸಂಸ್ಥೆಯ ಉಪಕುಲಪತಿ ಡಾ.ಹುಸೈನ್ ಸಖಾಫಿ ಚುಲ್ಲಿಕ್ಕೋಡ್ ಕಾರ್ಯಕ್ರಮ ಉದ್ಘಾಟಿಸಿದರು. ಪೆರೋಡ್ ಮುಹಮ್ಮದ್ ಅಝ್ಹರಿ ಮುಖ್ಯ ಭಾಷಣಗೈದರು. ದ.ಕ. ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮುಹಮ್ಮದ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮುಹಮ್ಮದಲಿ ಸಖಾಫಿ ಸುರಿಬೈಲು, ಶೈಖ್ ಮುಹಮ್ಮದ್ ಎ.ಮಜೀದ್ ಅಹ್ಮದ್ ಅಲ್ ಮುಅಲ್ಲಾ, ಅಹ್ಮದ್ ಅಲ್ ಮುಹೈರಿ, ಸೈಯದ್ ಹಫೀಝುಲ್ಲಾ ಉಪಸ್ಥಿತರಿದ್ದರು. ಪ್ರತಿಭೋತ್ಸವ ಹಾಗೂ ಅಸ್ಸುಫಾ ಪರೀಕ್ಷೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಲ್ ಇಹ್ಸಾನ್ ಕಾರ್ಯಕ್ರಮದ ಕುರಿತ ಸಾಕ್ಷ್ಯಚಿತ್ರವನ್ನು ಇದೇ ಸಂದರ್ಭ ಪ್ರದರ್ಶಿಸಲಾಯಿತು. ಕೆಸಿಎಫ್ ಶಾರ್ಜಾ ವಲಯ ಅಧ್ಯಕ್ಷ ಅಬೂಸ್ವಾಲಿಹ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ರಜಬ್ ಮುಹಮ್ಮದ್ ಉಚ್ಚಿಲ ಸ್ವಾಗತಿಸಿದರು. ಮೀಲಾದ್ ಕಾರ್ಯಕ್ರಮದ ಸಂಚಾಲಕ ಹುಸೈನ್ ಇನೋಳಿ ವಂದಿಸಿದರು.