ಬಹರೈನ್: ಅನಿವಾಸಿ ಭಾರತೀಯ ಉದ್ಯಮಿಗಳೊಂದಿಗೆ ರಾಹುಲ್ ಮಾತುಕತೆ
ಬಹರೈನ್, ಜ.10: ಗ್ಲೋಬಲ್ ಆರ್ಗನೈಝೇಶನ್ ಆಫ್ ಪೀಪಲ್ ಆಫ್ ಇಂಡಿಯನ್ ಒರಿಜಿನ್ (GOPIO) ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಗವಹಿಸಲು ಬಹರೈನ್ ಗೆ ತೆರಳಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅನಿವಾಸಿ ಭಾರತೀಯರನ್ನು, ಉದ್ಯಮಿಗಳನ್ನು, ಗಣ್ಯರನ್ನು ಭೇಟಿಯಾದರು.
ಈ ಸಂದರ್ಭ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಅಪಾರ. ಅನೇಕ ಭಾರತೀಯರು ಗಲ್ಫ್ ರಾಷ್ಟ್ರಗಳಲ್ಲಿ ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ದೇಶದ ಅಭಿವೃದ್ಧಿಗೆ, ಶಿಕ್ಷಣ, ಆರೋಗ್ಯ, ಉದ್ಯಮ ರಂಗದಲ್ಲಿ ಅನಿವಾಸಿ ಭಾರತೀಯರು ಇನ್ನಷ್ಟು ಹೆಚ್ಚಿನ ಕೊಡುಗೆ ನೀಡಬೇಕು ಎಂದರು.
ಅನಿವಾಸಿ ಭಾರತೀಯರ ಜೊತೆಗಿನ ಮಾತುಕತೆ ಸಂದರ್ಭ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್, ಉದ್ಯಮಿ, ಎನ್ ಎಂಸಿ ಹೆಲ್ತ್ ಕೇರ್ ನ ಸ್ಥಾಪಕ ಬಿ.ಆರ್. ಶೆಟ್ಟಿ, ಉದ್ಯಮಿಗಳಾದ ಯುಎಇ ಎಕ್ಸ್ ಚೇಂಜ್ ನ ಅಧ್ಯಕ್ಷ ವೈ ಸುಧೀರ್ ಕುಮಾರ್ ಶೆಟ್ಟಿ, ಎಕ್ಸ್ ಪರ್ಟೈಸ್ ಕಂಟ್ರಾಕ್ಟಿಂಗ್ ಕಂಪೆನಿ ಲಿಮಿಟೆಡ್ ನ ಆಡಳಿತ ನಿರ್ದೇಶಕ ಕೆ.ಎಸ್. ಶೇಖ್ , ನಜಮ್ ತೌಹೀದ್ ಮೊದಲಾದವರು ಉಪಸ್ಥಿತರಿದ್ದರು.