ಕರ್ನಾಟಕ ಕಲ್ಚರಲ್ ಫೌಂಡೇಶನ್: ರಿಯಾದ್ ಝೋನ್ ವಾರ್ಷಿಕ ಕೌನ್ಸಿಲ್
ರಿಯಾದ್, ಮೇ 5: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ಇದರ ವಾರ್ಷಿಕ ಕೌನ್ಸಿಲ್ ಸಭೆಯು ಇತ್ತೀಚೆಗೆ ಇಲ್ಲಿನ ಅಲ್ ಖಲೀಜ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಝೋನ್ ಅಧ್ಯಕ್ಷ ಹನೀಫ್ ಬೆಳ್ಳಾರೆ ಅಧ್ಯಕ್ಷತೆ ವಹಿಸಿದರು. ಕೆಸಿಎಫ್ ಒಲಯ್ಯ ಸೆಕ್ಟರ್ ಅಧ್ಯಕ್ಷ ಮುಸ್ತಫಾ ಝೈನಿ ಕಂಬಿಬಾಣೆ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ಬಶೀರ್ ತಲಪ್ಪಾಡಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಝೋನಲ್ ಪ್ರಕಾಶನ ವಿಭಾಗದ ಅಧ್ಯಕ್ಷ ನಿಝಾಂ ಸಾಗರ್ ಸಂಘಟನೆಯ ಮುಖ ವಾಣಿ "ಗಲ್ಫ್ ಇಶಾರ" ಪತ್ರಿಕೆಗೆ ಸಂಬಂಧಿಸಿದಂತೆ ಅದರ ಅಭಿಯಾನ, ರಿಯಾದ್ ವಲಯದ ಪ್ರಸಾರ ಸಂಖ್ಯೆ ಹಾಗೂ ಪತ್ರಿಕೆಯ ಒಂದು ವರ್ಷದ ಲಾಭ -ನಷ್ಟವನ್ನೊಳಗೊಂಡ ವಿಸ್ತೃತ ವರದಿಯನ್ನು ಸಭೆಯ ಮುಂದಿರಿಸಿದರು.
ಸಂಘಟನೆ ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆಸಿದ ವಿವಿಧ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂತ್ವನ ಚಟವಟಿಗಳಿಗೆ ಬೆಳಕು ಚೆಲ್ಲುವ ಹೃಸ್ವ ಸಾಕ್ಷ್ಯ ಚಿತ್ರವೊಂದನ್ನು ಸಭೆಯಲ್ಲಿ ಪ್ರದರ್ಶಿಸಲಾಯಿತು.
ಕಳೆದ ಸಾಲಿನಲ್ಲಿ ಅನೇಕ ಕಾರಣಗಳಿಂದ ಸಂಘಟನೆಯ ವಿವಿಧ ವಿಭಾಗಗಳಲ್ಲಿ ಖಾಲಿ ಬಿದ್ದಿದ್ದ ಹುದ್ದೆಗಳನ್ನು ಸಭೆಯಲ್ಲಿ ಭರ್ತಿ ಮಾಡಲಾಗಿದ್ದು ಈ ಸರದಿ ಯಲ್ಲಿ ಸಾಂತ್ವನ ವಿಭಾಗಕ್ಕೆ ಅಧ್ಯಕ್ಷರಾಗಿ ಹಂಝ ಮೈಂದಾಳ, ಶಿಕ್ಷಣ ವಿಭಾಗದಲ್ಲಿ ಅಧ್ಯಕ್ಷರಾಗಿ ಫಾರೂಕ್ ಸ'ಅದಿ ಹೆಚ್ ಕಲ್ಲು ಹಾಗೂ ರಾಷ್ಟ್ರೀಯ ಸಮಿತಿ ಕೌನ್ಸಿಲ್ ಸದಸ್ಯರಾಗಿ ಉಮ್ಮರ್ ಅಳಕೆಮಜಲು ಆಯ್ಕೆಯಾದರು.
ಇದೇ ವೇಳೆಗೆ ಕಳೆದ ಸಾಲಿನ "ಅಸ್ಸುಫ್ಫಾ" ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡ ರಬ್ವಾ ಸೆಕ್ಟರ್ ಸದಸ್ಯ ಅಬ್ದುಲ್ ಹಮೀದ್ ಮಂಜನಾಡಿ, ರಬ್ವಾ ಅಸ್ಸುಫ್ಫಾ ಕೇಂದ್ರದ ಶಿಕ್ಷಕ ಇಸ್ಮಾಯಿಲ್ ಮದನಿ ಒಕ್ಕೆತ್ತೂರು, ಬತ್ತಾ ಕೇಂದ್ರದ ಅಧ್ಯಾಪಕರುಗಳಾದ ಮುಸ್ತಫಾ ಸ'ಅದಿ ಸೂರಿ ಕುಮೇರು, ಫಾರೂಕ್ ಸ'ಅದಿ ಹೆಚ್ ಕಲ್ಲು ಮುಂತಾದವರನ್ನು ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.
ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರತಿನಿಧಿಯಾಗಿ ಆಗಮಿಸಿದ್ದ ಅಲ್ ಖಸೀಂ ಝೋನ್ ಕಾರ್ಯದರ್ಶಿ ಸಾಲಿ ಬೆಳ್ಳಾರೆ, ರಿಯಾದ್ ಝೋನ್ ಸಮಿತಿಯ ಕಳೆದ ಒಂದು ವರ್ಷದ ಕಾರ್ಯ ಚಟುವಟಿಕೆಗಳನ್ನು ಕೊಂಡಾಡಿದ್ದು ಮುಂದಿನ ದಿನಗಳಲ್ಲಿ ಸಂಘಟನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಕಾರ್ಯಕರ್ತರ ನಿಸ್ವಾರ್ಥ ಶ್ರಮದ ಅಗತ್ಯವಿದೆಯೆಂದು ಹೇಳಿದರು.
ವೇದಿಕೆಯಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ನಝೀರ್ ಕಾಷಿಪಟ್ಣ, ಸಾಂತ್ವನ ವಿಭಾಗದ ಅಧ್ಯಕ್ಷ ಸಲೀಂ ಕನ್ಯಾಡಿ, ಕೆಸಿಎಫ್ ರಿಯಾದ್ ಝೋನ್ ಕೋಶಾಧಿಕಾರಿ ಇಸ್ಮಾಯಿಲ್ ಕಣ್ಣಂಗಾರ್, ನೂತನ ಮುರೂಜ್ ಸೆಕ್ಟರ್ ಕೋಶಾಧಿಕಾರಿ ರಝಾಕ್ ಹಾಜಿ ಉಜಿರೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷ ಸಿದ್ದೀಕ್ ಸಖಾಫಿ ಪೆರುವಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಶೀದ್ ಮದನಿ ರಂತಡ್ಕ ಖಿರಾ'ಅತ್ ನಡೆಸಿದರು. ರಮೀಝ್ ಕುಳಾಯಿ ಆರಂಭದಲ್ಲಿ ಸ್ವಾಗತಿಸಿ ನವಾಝ್ ಚಿಕ್ಕಮಗಳೂರು ಕೊನೆಯಲ್ಲಿ ವಂದಿಸಿದರು. ಹಸೈನಾರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.