ಅಜ್ಮಾನ್: ‘ಕದಮ್’ ವಾರ್ಷಿಕೋತ್ಸವ
ಅಣ್ಣಯ್ಯ ಶೇರಿಗಾರ್ಗೆ ಕದಮ್ ಸಾಧಕ ಪ್ರಶಸ್ತಿ ಪ್ರದಾನ
ಅಜ್ಮಾನ್, ಡಿ.2: ಅಜ್ಮಾನ್ ಬೀಚ್ ಹೋಟೆಲ್ನಲ್ಲಿ ‘ಕದಮ್’(ಕುಂದಾಪುರ ದೇವಾಡಿಗ ಮಿತ್ರ)ನ 8ನೇ ವಾರ್ಷಿಕೋತ್ಸವ ನವೆಂಬರ್ 30ರಂದು ನಡೆಯಿತು.
ರಾಮಚಂದ್ರ ಬೆದ್ರಡ್ಕ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನದ ಆಡಳಿತ ಟ್ರಸ್ಟೀ ಅಣ್ಣಯ್ಯ ಶೇರಿಗಾರ್ , ಶೋಧನ್ ಪ್ರಸಾಸ್, ದಿನೇಶ್ ದೇವಾಡಿಗ, ಡಾ. ಯಾದವ್ ಹಾಗೂ ಕದಮ್ನ ಮಹಿಳಾ ಸದಸ್ಯೆಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರವಿ ತಲ್ಲೂರು, ಸಾದನ್ದಾಸ್, ಸುರೇಶ್ ಕಂಚಿಕಾನ, ನಿತ್ಯಾನಂದ ಬೆಸ್ಕೂರ್, ನಾರಾಯಣ , ಶೇಖರ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 2018ರ ಕದಮ್ ಸಾಧಕ ಪುರಸ್ಕಾರವನ್ನು ಅಣ್ಣಯ್ಯ ಶೇರಿಗಾರರಿಗೆ ಪ್ರದಾನ ಮಾಡಲಾಯಿತು. ಹಾಗೂ ಕದಮ್ ವೆಬ್ಸೈಟ್ ಅನ್ನು ದಿನೇಶ್ ದೇವಾಡಿಗ ಅನಾವರಣಗೊಳಿಸಿದರು. ಕದಮ್ ಸಂಘಟನೆ ಅಲ್ಪಾವಧಿಯಲ್ಲೇ ಮಾಡಿರುವ ಸಾಧನೆಯನ್ನು, ಶೈಕ್ಷಣಿಕ ಹಾಗೂ ಆರೋಗ್ಯ ಸೇವೆ, ರಕ್ತದಾನ ಶಿಬಿರದ ಆಯೋಜನೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರಿಗೆ ಶಿಕ್ಷಣ ಪಡೆಯಲು ನೆರವಾಗುತ್ತಿರುವುದನ್ನು ಕಾರ್ಯಕ್ರಮದ ಅತಿಥಿಗಳು ಶ್ಲಾಘಿಸಿದರು.
ಪ್ರತಿಮಾ ನಾರಾಯಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿತ್ಯಾನಂದ ಬೆಸ್ಕೂರ್ ಸ್ವಾಗತಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಾಸುದೇವ್, ರವಿ ಮತ್ತು ಮಂಜು ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಯುವರಾಜ್ ದೇವಾಡಿಗ, ಜಗದೀಶ್ ದೇವಾಡಿಗ, ಲ್ಯಾನ್ಸಿ ಮತ್ತಿತರರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ನಿತ್ಯಾನಂದ ಬೆಸ್ಕೂರ್ ಲಾಟರಿ ಡ್ರಾ ನೆರವೇರಿಸಿದರು. ಸಂತೋಷ್ ಕೊಲ್ನಾಡು ವಂದನಾರ್ಪಣೆ ಸಲ್ಲಿಸಿದರು. ಇದೇ ಸಂದರ್ಭ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.