ದುಬೈ: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಇಫ್ತಾರ್ ಕೂಟ
ದುಬೈ, ಮೇ 29: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ ಮಂಗಳೂರು) ಮೇ 21ರಂದು ದುಬೈಯ ಪರ್ಲ್ ಸೂಟ್ಸ್ ಹೋಟೆಲ್ನಲ್ಲಿ ಇಫ್ತಾರ್ ಕೂಟ ಆಯೋಜಿಸಿತ್ತು.
ಎಲ್ಲ ವಯೋಮಾನದ ಮತ್ತು ಕ್ಷೇತ್ರದ ಸುಮಾರು 70 ಅನಿವಾಸಿ ಉದ್ಯಮಿಗಳು ಮತ್ತು ವೃತ್ತಿಪರರು ಈ ಇಫ್ತಾರ್ನಲ್ಲಿ ಭಾಗವಹಿಸಿದರು.
ಬಿಸಿಸಿಐ-ಯುಎಇ ಬಳಗದ ಪ್ರಧಾನ ಕಾರ್ಯದರ್ಶಿ ತನ್ವೀರ್ ರಝಾಕ್ ಕಾರ್ಯಕ್ರಮ ನಿರೂಪಿಸಿದರು. ಬಿಸಿಸಿಐ ಯುಎಇ ಬಳಗದ ಉಪ ನಿರ್ದೇಶಕ ಅಬ್ದುಲ್ಲ ಮಾದುಮೂಲೆ ಕುರ್ ಆನ್ ಪಠಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು.
ಬಿಸಿಸಿಐ ಕಾರ್ಯಕಾರಿ ಸಮಿತಿ ಸದಸ್ಯ ಮುಹಮ್ಮದ್ ಅಲಿ ಉಚ್ಚಿಲ, ದಿಕ್ಸೂಚಿ ಭಾಷಣಕಾರ ಅಲ್ಮಿರ್ ಸ್ಮಜ್ಲೋವಿಕ್ ಮತ್ತು ಇತರ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ತಮ್ಮ ಆಹ್ವಾನವನ್ನು ಸ್ವೀಕರಿಸಿ ಇಫ್ತಾರ್ನಲ್ಲಿ ಪಾಲ್ಗೊಂಡಿರುವುದಕ್ಕೆ ಕೃತಜ್ಞತೆ ಅರ್ಪಿಸಿದರು.
ಉಪವಾಸ ತ್ಯಜಿಸಿದ ಮತ್ತು ಸಂಜೆ ಪ್ರಾರ್ಥನೆ ನಂತರ ಸಂಕ್ಷಿಪ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲ ಗಣ್ಯರಿಗೂ ರಮಝಾನ್ ಶುಭಾಶಯಗಳೊಂದಿಗೆ ಉಡುಗೊರೆಯನು ನೀಡಲಾಯಿತು. ಉದ್ಯಮ ಸಿದ್ಧಾಂತಗಳು ಎಂಬ ವಿಷಯದಲ್ಲಿ ವಿದ್ವಾಂಸ, ಪ್ರಬೋಧನೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮತ್ತು ಶ್ವಾಸಕೋಶ ರಕ್ಷಣೆ ವಿಶೇಷಜ್ಞ ಅಲ್ಮಿರ್ ಸ್ಮಜ್ಲೋವಿಕ್ ಮಾಹಿತಿ ಭರಿತ, ಅತ್ಯುತ್ತಮ, ನಿಖರ ಭಾಷಣ ಮಾಡಿದರು.
ಬಿಸಿಸಿಐ ಯುಎಇ ಬಳಗದ ಅಧ್ಯಕ್ಷ ಎಸ್.ಎಂ ಬಶೀರ್ ಬಿಸಿಸಿಐ ಬಗ್ಗೆ ಮಾಹಿತಿಪೂರ್ಣ ಮಾತುಗಳನ್ನಾಡಿದರು. ಬಿಸಿಸಿಐ ಆರಂಭಿಸಿರುವ ಯೋಜನೆಗಳ ಬಗ್ಗೆ ತಿಳಿಸಿದ ಅವರು ಸಮುದಾಯದ ಜನರು ಬಿಸಿಸಿಐ ಸದಸ್ಯರಾಗುವ ಮೂಲಕ ಬೆಂಬಲ ನೀಡುವಂತೆ ಮನವಿ ಮಾಡಿದರು.
ಹಂಝ ಅಬ್ದುಲ್ ಖಾದರ್, ಅಬ್ದುಲ್ ರವೂಫ್, ಅಲ್ತಾಫ್ ಖಾತಿಬ್, ನವೀದ್, ಅಲ್ತಾಫ್ ಮಡಿಕೇರಿ, ಅಲ್ತಾಫ್ ಪರಂಗಿಪೇಟೆ, ಸಿದ್ದಿಕ್ ಉಚ್ಚಿಲ ಮತ್ತು ಇಮ್ರಾನ್ ಖಾನ್ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಬಿಸಿಸಿಐ ಯುಎಇ ಉಪಾಧ್ಯಕ್ಷ ಹಿದಾಯತ್ ಅಡ್ಡೂರು ವಂದಿಸಿದರು.