ದಮಾಮ್: ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ಇಫ್ತಾರ್ ಕೂಟ
ಜುಬೈಲ್ : ಇಂಡಿಯನ್ ಸೋಶಿಯಲ್ ಫೋರಂ ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಜುಬೈಲ್ ನ 'ಮರಾಫಿಕ್ ಬೀಚ್ ಕ್ಯಾಂಪ್' ಸಭಾಂಗಣದಲ್ಲಿ ಇಫ್ತಾರ್ ಕೂಟ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ಶರೀಫ್ ಅವರು ಮಾತನಾಡುತ್ತಾ, ನಾವು ಭಾರತದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಅವಲೋಕಿಸಿ ಮುಂದಿನ ದಿನಗಳಲ್ಲಿ ಫ್ಯಾಷಿಸಮ್ ವಿರುದ್ಧ ಒಂದಾಗಿಕೊಂಡು ನೈಜ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಇಂಡಿಯನ್ ಸೋಶಿಯಲ್ ಫೋರಂ ದೆಹಲಿ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಹಕೀಂ ಖಾನ್ ಅವರು ರಮಝಾನ್ ತಿಂಗಳ ವಿಶೇಷತೆಗಳ ಬಗ್ಗೆ ಮಾತನಾಡಿ, ಇತಿಹಾಸದಲ್ಲಿ ಅಸತ್ಯದ ವಿರುದ್ಧ ನಡೆದ ಹೋರಾಟಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸುವ ಸನ್ನಿವೇಶಗಳು ಉಂಟಾಗಿತ್ತು ಅದೇ ರೀತಿ ಸತ್ಯಕ್ಕೆ ಯಾವಾಗಲೂ ಜಯ ಇದೆ ಮತ್ತು ಪ್ರಸ್ತುತ ಭಾರತದಲ್ಲಿ ಪ್ರಜಾಸತ್ತೆಯ ಉಳಿವಿಗೆ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಅಲ್ಪಸಂಖ್ಯಾತ-ದಲಿತ, ಹಿಂದುಳಿದ ಮತ್ತು ದೇಶದ ಹಿತಚಿಂತಕರು ಒಟ್ಟು ಸೇರಿಕೊಂಡು ಸುಭದ್ರ ಮತ್ತು ಸಾರ್ವಭೌಮ ದೇಶದ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಇಂಡಿಯಾ ಫ್ರೆಟರ್ನಿಟಿ ಫೋರಂ ಈಸ್ಟರ್ನ್ ಪ್ರೋವಿನ್ಸ್ ಕರ್ನಾಟಕ, ದಮಾಮ್ ಜಿಲ್ಲಾಧ್ಯಕ್ಷ ಅಥಾವುಲ್ಲಾ, ಫತೆಹ್ ಅಲ್ ಜುಬೈಲ್ ಸಂಸ್ಥೆಯ ಮ್ಯಾನೆಜರ್ ರಫೀಕ್ ಹಾಗೂ ಇಂಡಿಯನ್ ಸೋಶಿಯಲ್ ಫೋರಂ ಜುಬೈಲ್ ಘಟಕದ ಅಧ್ಯಕ್ಷ ಶಮೀರ್ ಅಹ್ಮದ್ ಉಪಸ್ಥಿತರಿದ್ದರು.
ಇಂಡಿಯನ್ ಸೋಶಿಯಲ್ ಫೋರಂ ದಕ್ಷಿಣ ಕನ್ನಡ ಜುಬೈಲ್ ಘಟಕದ ಅಧ್ಯಕ್ಷ ನಝೀರ್ ತುಂಬೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.