ದುಬೈ: ವೇದಿಕೆಯಲ್ಲೇ ಕುಸಿದು ಮೃತಪಟ್ಟ ಭಾರತ ಮೂಲದ ಸ್ಟ್ಯಾಂಡ್ ಅಪ್ ಕಾಮಿಡಿಯನ್
ನಟನೆ ಎಂದು ಭಾವಿಸಿದ ಪ್ರೇಕ್ಷಕರು
ದುಬೈ, ಜು.21: ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಎದುರು ಪ್ರದರ್ಶನ ನೀಡುತ್ತಿದ್ದ ಭಾರತೀಯ ಮೂಲದ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಒಬ್ಬರು ವೇದಿಕೆಯಲ್ಲೇ ಕೊನೆಯುಸಿರೆಳೆದ ಘಟನೆ ದುಬೈಯಲ್ಲಿ ನಡೆದಿದೆ. ಭಾರೀ ಉದ್ವೇಗದಿಂದ ಈ ಸಾವು ಸಂಭವಿಸಿರಬೇಕು ಎಂದು ಶಂಕಿಸಲಾಗಿದೆ.
ಮಂಜುನಾಥ ನಾಯ್ಡು (36) ಶುಕ್ರವಾರ ಕಾರ್ಯಕ್ರಮ ನೀಡುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾದರು. ಪಕ್ಕದ ಬೆಂಚ್ನಲ್ಲಿ ಕುಳಿತ ತಕ್ಷಣ ನೆಲದ ಮೇಲೆ ಕುಸಿದು ಬಿದ್ದರು. ಆದರೆ ಪ್ರೇಕ್ಷಕರು, ಇದನ್ನು ಪ್ರದರ್ಶನದ ಭಾಗವಾಗಿರಬೇಕೆಂದು ಭಾವಿಸಿದರು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
ಅಬುಧಾಬಿಯಲ್ಲಿ ಜನಿಸಿದ ನಾಯ್ಡು ಬಳಿಕ ದುಬೈಗೆ ಸ್ಥಳಾಂತರಗೊಂಡಿದ್ದರು. "ಪ್ರದರ್ಶನ ನೀಡಲು ವೇದಿಕೆಗೆ ತೆರಳಿದ ಮಂಜುನಾಥ್, ತಮ್ಮ ಕಥೆಗಳ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದ್ದರು. ತಮ್ಮ ತಂದೆ ಹಾಗೂ ಕುಟುಂಬದ ಬಗ್ಗೆ ಮಾತನಾಡುತ್ತಿದ್ದರು. ಬಳಿಕ ತಾನು ಹೇಗೆ ಉದ್ವೇಗದಿಂದ ಬಳಲುತ್ತಿದ್ದೇನೆ ಎಂಬ ಕಥೆ ಹೇಳುತ್ತಿದ್ದರು. ಕಥೆ ಹೇಳುತ್ತಿದ್ದಂತೆಯೇ ಕುಸಿದು ಬಿದ್ದರು" ಎಂದು ಸಹನಟ ಹಾಗೂ ಸ್ನೇಹಿತ ಮಿಕ್ದಾದ್ ದೋಹಾವಾಲಾ ಘಟನೆಯ ವಿವರ ನೀಡಿದ್ದಾರೆ.
"ಅದು ನಟನೆಯ ಭಾಗವಾಗಿರಬೇಕು ಎಂದು ಜನ ಭಾವಿಸಿದರು. ಉದ್ವೇಗದ ಬಗ್ಗೆ ಮಾತನಾಡುತ್ತಾ ಕುಸಿದು ಬಿದ್ದ ಕಾರಣದಿಂದ ಅದು ಜೋಕ್ ಇರಬೇಕು ಎಂದುಕೊಂಡರು. ಇವರ ಪೋಷಕರು ಈಗಾಗಲೇ ಮೃತಪಪಟ್ಟಿದ್ದು, ಒಬ್ಬ ಸಹೋದರ ಮಾತ್ರ ಇದ್ದಾರೆ ಎಂದು ದೋಹಾವಾಲಾ ಬಣ್ಣಿಸಿದ್ದಾರೆ.