ಮಕ್ಕಾ: ಹಜ್ ಶಿಬಿರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ
ಮಕ್ಕಾ, ಆ.16: ಪವಿತ್ರ ಹಜ್ ಯಾತ್ರೆಗೆ ತೆರಳಿರುವ ಕನ್ನಡಿಗ ಯಾತ್ರಿಕರು ಹಜ್ ಕ್ಯಾಂಪ್ 169ರ ಪ್ರಾರ್ಥನಾ ಭವನದಲ್ಲಿ ಭಾರತದ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಜ್ ಸಮಿತಿಯ ಸದಸ್ಯ ಕೆ. ಎಂ. ಅಬೂಬಕರ್ ಸಿದ್ದೀಖ್ ಮೊಂಟುಗೋಳಿ, ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮುಸ್ಲಿಮರು ವಹಿಸಿದ ಪಾತ್ರವನ್ನು ವಿವರಿಸಿದರು. ಹಜ್ ಯಾತ್ರಿಕನ ಕಣ್ಣುಗಳು ಧನ್ಯಗೊಳ್ಳುವ ಎರಡು ಸಂದರ್ಭಗಳೆಂದರೆ, ಮಕ್ಕಾದಲ್ಲಿ ಪವಿತ್ರ ಕಅಬಾ ಶರೀಫ್ ಕಾಣುವಾಗ ಮತ್ತು ಮದೀನಾದಲ್ಲಿ ಪ್ರವಾದಿಶ್ರೇಷ್ಠರ ಪುಣ್ಯ ಸಮಾಧಿ ಮೇಲಿನ ಹಸಿರು ಗುಂಬಝ್ ಗೋಚರಿಸುವಾಗ. ಭಾರತೀಯ ಹಾಜಿಗಳ ಕಣ್ಣು ಸಂಭ್ರಮಿಸುವ ಇನ್ನೊಂದು ಸಂದರ್ಭವೆಂದರೆ ಭಾರತೀಯ ಯಾತ್ರಿಕರ ವಾಸ್ತವ್ಯ ವಲಯದಲ್ಲಿ ರಾರಾಜಿಸುವ ತ್ರಿವರ್ಣ ಧ್ವಜ ನೋಡುವಾಗ. ನಮ್ಮ ದೇಶದ ಜನ, ನಮ್ಮ ದೇಶದ ಧ್ವಜ, ನಮ್ಮ ದೇಶದ ಸಂಕೇತಗಳನ್ನು ಕಾಣುವಾಗಿನ ಖುಷಿ, ಸಂಭ್ರಮವನ್ನು ವರ್ಣಿಸಲಾಗದು ಎಂದರು.
ಹಾವೇರಿ ಮುಈನುಸ್ಸುನ್ನ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಮುಸ್ತಫ ನಈಮಿ ಕಾರ್ಯಕ್ರಮ ಉದ್ಘಾಟಿಸಿದರು. ಅಬ್ದುರ್ರಹ್ಮಾನ್ ಬಾಖವಿ ಪ್ರಾರ್ಥನೆ ನಡೆಸಿದರು.
ಡಿಕೆಎಸ್ಸಿ ನಾಯಕ ಅಬ್ಬಾಸ್ ಹಾಜಿ ಎಲಿಮಲೆ, ಕೆಸಿಎಫ್ ನಾಯಕ ಮೂಸಾ ಹಾಜಿ ಕಿನ್ಯಾ, ರಾಜ್ಯ ದಾರಿಮೀಸ್ ಉಪಾಧ್ಯಕ್ಷ ಮಾಹಿನ್ ದಾರಿಮಿ ಪಾತೂರು ಮೊದಲಾದವರು ಉಪಸ್ಥಿತರಿದ್ದರು. ಬದ್ರುಲ್ ಮುನೀರ್ ಹಿಮಮಿ ಸ್ವಾಗತಿಸಿ, ವಂದಿಸಿದರು.