ಕೆಸಿಎಫ್ ನಿಂದ ‘ರಿಬಾತ್ 19’ ಸ್ನೇಹ ಕೂಟ, ಹಜ್ ಸ್ವಯಂಸೇವಕರಿಗೆ ಅಭಿನಂದನಾ ಸಮಾರಂಭ
ರಿಯಾದ್, ಸೆ.22: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ರಿಯಾದ್ ಝೋನ್ ಸಮಿತಿ ಹಮ್ಮಿಕೊಂಡಿದ್ದ ‘ರಿಬಾತ್ 19’ ಎಂಬ ಸ್ನೇಹ ಕೂಟ ಹಾಗೂ ಹಜ್ ಸ್ವಯಂ ಸೇವಕರ ಅಭಿನಂದನಾ ಕಾರ್ಯಕ್ರಮವು ಇಲ್ಲಿನ ‘ನೋಫಾ ಇಸ್ತಿರಾಹ’ದಲ್ಲಿ ಇತ್ತೀಚೆಗೆ ನಡೆಯಿತು.
ಸೈಯದ್ ರಫೀಕ್ ತಂಙಳ್ ಕೊಡಗು ಧ್ವಜಾರೋಹಣಗೈದರು. ಝೋನ್ ಅಧ್ಯಕ್ಷ ಫಾರೂಕ್ ಸಅದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷ ನಝೀರ್ ಮುಸ್ಲಿಯಾರ್ ನಂದಾವರ ಉದ್ಘಾಟಿಸಿದರು. ಇಲ್ಯಾಸ್ ಲತ್ವೀಫಿ ಕಿರಾಅತ್ ಪಠಿಸಿದರು. ಸಿದ್ದೀಕ್ ಸಖಾಫಿ ಪೆರುವಾಯಿ ಸಂದೇಶ ಭಾಷಣ ಮಾಡಿದರು.
ಎನ್.ಎಸ್.ಅಬ್ದುಲ್ಲಾ, ಬಶೀರ್ ತಲಪಾಡಿ, ಇಸ್ಮಾಯೀಲ್ ಮದನಿ ಶುಭ ಹಾರೈಸಿದರು. ನಂತರ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗೆ ಆಯ್ಕೆಗೊಂಡ ಖಮರುದ್ದೀನ್ ಗೂಡಿನಬಳಿಯವರನ್ನು ರಿಯಾದ್ ಝೋನ್ ವತಿಯಿಂದ ಶಾಲು ಹೊದಿಸಿ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಝೋನ್ ಸಮಿತಿಯ ಕೊಡುಗೆಯಾದ ಉಚಿತ ಆ್ಯಂಬುಲೆನ್ಸ್'ನ ಅಧಿಕೃತ ಘೋಷಣೆಯನ್ನು ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ನಿಝಾಂ ಸಾಗರ್ ನಿರ್ವಹಿಸಿದರು.
ರಾಷ್ಟ್ರೀಯ ಸಮಿತಿಯ ವಿಶೇಷ ಪುರಸ್ಕಾರಕ್ಕೆ ಅರ್ಹರಾದ ಹನೀಫ್ ಕಣ್ಣೂರುರನ್ನು ರಾಷ್ಟ್ರೀಯ ಸಮಿಯತಿ ನಾಯಕರಾದ ಖಮರುದ್ದೀನ್ ಮತ್ತು ಬಶೀರ್ ತಲಪಾಡಿ ಸ್ಮರಣಿಕೆ ನೀಡಿ ಪುರಸ್ಕರಿಸಿದರು.
ಇದೇ ಸಂದರ್ಭದಲ್ಲಿ ಝೋನ್ ಅಧೀನದಲ್ಲಿ ನಡೆದಿದ್ದ ‘ಗ್ರ್ಯಾಂಡ್ ಇಫ್ತಾರ್’ ಸ್ವಾಗತ ಸಮಿತಿಯ ಅಧ್ಯಕ್ಷ ಅಳಕೆಮಜಲು ಮತ್ತು ಕನ್ವೀನರ್ ಅನ್ಸಾರ್ ಉಳ್ಳಾಲ ಹಾಗೂ ಹಜ್ ವಲಂಟಿಯರ್ ಕೋರ್ ಸಮಿತಿಯ ಅಧ್ಯಕ್ಷ ಹನೀಫ್ ಕಣ್ಣೂರು, ಕನ್ವೀನರ್ ಶಮೀರ್ ಜೆಪ್ಪುರವರನ್ನು ಶಾಲು ಹೊದಿಸಿ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ರಿಯಾದ್ ನಿಂದ ಈ ವರ್ಷದ ಹಜ್ ಸೇವೆಗೆ ತೆರಳಿದ್ದ ಸುಮಾರು ಎಪ್ಪತ್ತೈದು ಸ್ವಯಂ ಸೇವಕರ ಪ್ರಮಾಣ ಪತ್ರವನ್ನು ವೇದಿಕೆಯಲ್ಲಿದ್ದ ವಿವಿಧ ನಾಯಕರು ವಿತರಿಸಿದರು.
ನಂತರ ಕಾರ್ಯಕರ್ತರಿಗಾಗಿ ರಸಪ್ರಶ್ನೆ ಮತ್ತು ಟ್ಯಾಲೆಂಟ್ ಹಂಟ್ ಕಾರ್ಯಕ್ರಮ ನಡೆಯಿತು.
ಸೈಯದ್ ತಾಜುದ್ದೀನ್ ತಂಙಳ್, ಅಬ್ದುರ್ರಝಾಕ್ ಹಾಜಿ, ಅಬೂಬಕರ್ ಸಾಲೆತ್ತೂರು, ಉಮರ್ ಅಳಕೆಮಜಲು, ಅಬ್ದುರ್ರಹ್ಮಾನ್ ಮದನಿ ಹಾಗೂ ವಿವಿಧ ಸೆಕ್ಟರ್ ಸಮಿತಿಯ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ವೀನರ್ ಹಬೀಬ್ ತೆಕ್ಕಾರ್ ಸ್ವಾಗತಿಸಿದರು. ಅಶ್ರಫ್ ಕಿಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಶಮೀರ್ ಜೆಪ್ಪು ವಂದಿಸಿದರು.