ಕೆಡುಕಿನ ವಿರುದ್ಧದ ಹೋರಾಟವೇ ವರ್ತಮಾನದ ಪ್ರವಾದಿ ಸಂದೇಶ: ರಿಯಾಝ್ ಫರಂಗಿಪೇಟೆ
ದಮ್ಮಾಮ್, ಡಿ.5: ಕೆಡುಕಿನ ವಿರುದ್ಧದ ಹೋರಾಟವೇ ವರ್ತಮಾನದ ಪ್ರವಾದಿ ಸಂದೇಶವಾಗಿದೆ. ಸಮಾಜದಲ್ಲಿರುವ ಅನೀತಿ, ಅಕ್ರಮ, ಅನ್ಯಾಯ ಮುಂತಾದ ಕೆಡುಕುಗಳನ್ನು ತಡೆಯುವುದರಲ್ಲಿ ಪ್ರವಾದಿ ಚರ್ಯೆಯು ಪ್ರಕಟವಾಗುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ಕೆಡುಕುಗಳೇ ಸಮಾಜವನ್ನು ಆಳುತ್ತಿರುವಂತೆ ಭಾಸವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪ್ರವಾದಿ ಸಂದೇಶವನ್ನು ಪ್ರಾಯೋಗಿಕ ರೂಪಕ್ಕಿಳಿಸಬೇಕಾದ ಅಗತ್ಯವಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅಭಿಪ್ರಾಯಿಸಿದ್ದಾರೆ.
ಇಂಡಿಯಾ ಫ್ರಟರ್ನಿಟಿ ಫೋರಂ ಅಲ್ ಹಸ್ಸಾ, ಸೌದಿ ಅರೆಬಿಯಾ ವತಿಯಿಂದ ಅಲ್ ಹಸ್ಸಾದ ಅಲ್ ಹಫೂಫ್ ಬೆಸ್ಟ್ ರೆಸಾರ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ "ನಮ್ಮ ಪ್ರವಾದಿ ಸ.ಅ" ಪ್ರವಾದಿ ಸಂದೇಶ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಇಂಡಿಯಾ ಫ್ರಟರ್ನಿಟಿ ಫೋರಂ ಅಲ್ ಹಸ್ಸಾ ವಲಯ ಅಧ್ಯಕ್ಷ ಅಶ್ಫಾಕ್ ಸಾಣೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಂಡಿಯಾ ಫ್ರಟರ್ನಿಟಿ ಫೋರಂ ದಮ್ಮಾಮ್ ಕಾರ್ಯದರ್ಶಿ ಸಾಜಿದ್ ವಳವೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಇಂಡಿಯನ್ ಸೋಶಿಯಲ್ ಫೋರಂ ದಮ್ಮಾಮ್ ಇದರ ಕರ್ನಾಟಕ ರಾಜ್ಯ ಅಧ್ಯಕ್ಷ ಶರೀಫ್ ಜೋಕಟ್ಟೆ, ಅನಿವಾಸಿ ಕನ್ನಡಿಗ ಸರ್ತಾಝ್ ಮಂಗಳೂರು, ಇಂಡಿಯನ್ ಸೋಶಿಯಲ್ ಫೋರಂ ಅಲ್ ಹಸ್ಸಾ ಅಧ್ಯಕ್ಷ ರಫೀಕ್ ಬುಡೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಮಾಲುದ್ದೀನ್ ಹಳೆಯಂಗಡಿ ಕಿರಾಅತ್ ಪಠಿಸಿದರು. ಅಬ್ಬಾಸ್ ಗುರುಪುರ ಸ್ವಾಗತಿಸಿದರು. ಅಬ್ದುಲ್ ರವೂಫ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಜಹಫರ್ ಸಕಲೇಶಪುರ ವಂದಿಸಿದರು.