ದಮ್ಮಾಮ್: ಮೇ 26 ರಂದು ಅಲ್ ಖಾದಿಸ ಫ್ಯಾಮಿಲಿ ಮೀಟ್
ದಮ್ಮಾಮ್, ಮೇ 23:ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಎಂಬ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಧಾರ್ಮಿಕ, ಸಾಮಾಜಿಕ,ಆಧ್ಯಾತ್ಮಿಕವಾಗಿ ನೇತೃತ್ವ ನೀಡುತ್ತಾ ಬಂದಿರುವ ಕಾವಲ್ಕಟ್ಟೆ ಹಝ್ರತ್ಎಂದೇ ಪ್ರಸಿದ್ಧರಾದ ಮುಹಮ್ಮದ್ ಫಾಝಿಲ್ ರಝ್ವಿಯವರ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನ ಕಾವಳಕಟ್ಟೆಯಲ್ಲಿ ಅಲ್ ಖಾದಿಸ ವಿದ್ಯಾಸಂಸ್ಥೆಯನ್ನು ಆರಂಭಿಸಲಾಗಿದೆ.
ಈ ವಿದ್ಯಾಸಂಸ್ಥೆಯ ಅಧೀನದಲ್ಲಿ ಅಂಧರ ವಿದ್ಯಾಲಯ, ದೈಹಿಕ, ಮಾನಸಿಕ ವಿಕಲಚೇತನ ಮಕ್ಕಳ ಪೋಷಣಾ ಕೇಂದ್ರ, ದಅವಾ ಕಾಲೇಜು, ಹಿಪ್ಳುಳ್ ಕುರ್ಆನ್ ಕಾಲೇಜು ಮತ್ತು ದಾರುಲ್ ಉಲೂಂ ಕಾಲೇಜುಗಳು ತಲೆ ಎತ್ತಲಿವೆ. ಸಮುದಾಯದಲ್ಲಿ ಹಿಂದುಳಿದ ಮತ್ತು ಅಂಗವಿಕಲರ ಶೈಕ್ಷಣಿಕ ಉದ್ದೇಶದಿಂದ ಈ ಸಂಸ್ಥೆಯನ್ನು ಆರಂಭಿಸಲಾಗಿದ್ದು ಯೋಜನೆಯ ಸಾಕಾರಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಅಲ್ ಖಾದಿಸ ಫ್ಯಾಮಿಲಿ ಮೀಟ್ನ್ನು ಮೇ 26ರಂದು ರಾತ್ರಿ ದಮ್ಮಾಮ್ನ 91 ಇಸ್ತಿರಾಹ್ ಪನೋರಮದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಭಾಗವಹಿಸಲಿದ್ದಾರೆ. ಜೊತೆಗೆ ಅನೇಕ ಗಣ್ಯ ಉಲಮಾ, ಉಮಾರಾ ನೇತಾರರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.