ಯುಎಇಯಿಂದ ಮರಳ ಬಯಸುವ ಕನ್ನಡಿಗರು 'ಕೆ.ಎನ್.ಆರ್.ಐ' ವೆಬ್ ಸೈಟ್ ನಲ್ಲಿ ಹೆಸರು ನೋಂದಾಯಿಸಲು ಕರೆ
ಪ್ರವೀಣ್ ಕುಮಾರ್ ಶೆಟ್ಟಿ
ದುಬೈ :ಯು ಎ ಇ ಯಲ್ಲಿರುವ ಅನಿವಾಸಿ ಕನ್ನಡಿಗರಲ್ಲಿ ಕೋವಿಡ್19 ಸಂಕಷ್ಟದ ಕಾರಣ ತಾಯ್ನಾಡಿಗೆ ಮರಳಲು ಬಯಸುವವರು ತಮ್ಮ ಹೆಸರನ್ನು ಕೆಎನ್ ಆರ್ ಐ ಫೋರಮ್ ನ (WWW.KNRIUAE.COM) ವೆಬ್ ಸೈಟ್ ನಲ್ಲಿ ನೋಂದಾಯಿಸಬೇಕಾಗಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಹಾಗು ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಅಂಬಲತೆರೆ ಅವರು ದುಬೈಯಲ್ಲಿ ಜಂಟಿಯಾಗಿ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗರ್ಭಿಣಿಯರು, ಇನ್ನಿತರ ಆರೋಗ್ಯ ಸಮಸ್ಯೆ ಇದ್ದವರು, ನೌಕರಿ ಕಳದುಕೊಂಡವರು, ಸಂದರ್ಶನ (ವಿಝಿಟ್) ವೀಸಾದಲ್ಲಿ ಬಂದು ಸಮಯಕ್ಕೆ ಹಿಂತಿರುಗಲು ಸಾಧ್ಯವಾಗದೆ ಇದ್ದವರು ಹಾಗು ವಯಸ್ಸಾದ ಹಿರಿಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಕೆ ಎನ್ ಆರ್ ಐ ವೆಬ್ ಸೈಟ್ ನಲ್ಲಿ ಹೆಸರು ನೊಂದಾಯಿಸಿದ ಅನಿವಾಸಿ ಕನ್ನಡಿಗರು ಕಡ್ಡಾಯವಾಗಿ ಭಾರತ ರಾಯಬಾರಿ ವೆಬ್ ಸೈಟ್ ನಲ್ಲಿಯೂ (www.cgidubai.gov.in) ತಮ್ಮ ಹೆಸರನ್ನು ನೊಂದಾಯಿಸಬೇಕು.
ಕೆ ಎನ್ ಆರ್ ಐ ಫೋರಮ್ ಇಲ್ಲಿಂದ ಹಿಂತಿರುಗುವ ಕರ್ನಾಟಕದವರದು ಮಾತ್ರ ಮಾಹಿತಿ ಪಡಿಯುವುದು ಆದರೆ ರಾಯಭಾರಿ ಕಚೇರಿ ಇಲ್ಲಿಂದ ಹಿಂತಿರುಗಲು ಬಯಸುವ ಇಡೀ ಅನಿವಾಸಿ ಭಾರತೀಯರ ಮಾಹಿತಿ ಪಡೆದುಕೊಳ್ಳುತಿದ್ದಾರೆ. ಹಿಂತಿರುಗಿ ಹೋಗಲು ವಿಮಾನ ಅಥವಾ ಹಡಗು ಅದರ ಟಿಕೆಟ್ ವೆಚ್ಚದ ಸಂಪೂರ್ಣ ಜವಾಬ್ದಾರಿಕೆ ಹೇಗೆ ಎಂಬುದು ಕೇಂದ್ರ ಹಾಗು ರಾಜ್ಯ ಸರಕಾರದ ನಿರ್ಧಾರಕ್ಕೆ ಸೀಮಿತವಾಗಿದೆ. ಆ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಇನ್ನೂ ಕೇಂದ್ರ ಹಾಗು ರಾಜ್ಯ ಸರಕಾರದಿಂದ ಹೊರಬಂದಿಲ್ಲ. ಹಿಂತಿರುಗಿ ಹೋಗುವವರ ಸಂಪೂರ್ಣ ಮಾಹಿತಿ ಕೇಂದ್ರ ಹಾಗು ರಾಜ್ಯ ಸರಕಾರಕ್ಕೂ ಸಂಬಂಧಪಡುವ ಇಲಾಖೆಗೂ ನೀಡಿ ಅವರಿಗೆ ಪೂರ್ವ ಸಿದ್ಧತೆಗೆ ಅನುಗುಣವಾಗಲು ಮಾಹಿತಿ ನೀಡಲಾಗುವುದು. ಹೆಸರು ನೊಂದಾಯಿಸುವಾಗ ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರಿದ್ದಲ್ಲಿ ಅವರು ಬೇರೆ ಬೇರೆಯನ್ನಾಗಿ ಹೆಸರು ನೋಂದಾಯಿಸಬೇಕು ಹಾಗು ಈಗ ಹಿಂತಿರುಗಿ ಹೋಗಲು ಸರಿಯಾದ ಕಾರಣಗಳು ಹೆಸರು ನೊಂದಾಯಿಸುವಾಗ ತಿಳಿಸಬೇಕು .ಹಿಂತಿರುಗಿ ಹೋಗುವ ಯಾವುದೇ ಅನಿವಾಸಿ ಕನ್ನಡಿಗರು ಕೇಂದ್ರ ಹಾಗು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ನೀಡುವ ಮಾರ್ಗದರ್ಶನಕ್ಕೆ ಸೀಮಿತವಾಗಿ ಇರಬೇಕು ಎಂಬುದು ಕಡ್ಡಾಯವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದುಬೈಯಲ್ಲಿ ವೀಡಿಯೊ ಕಾನ್ಫರನ್ಸ್ ಮೂಲಕ ನಡೆದ ಕೆ ಎನ್ ಆರ್ ಐ ಸಭೆಯಲ್ಲಿ ಈ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಯಿತು. ಹಿಂತಿರುಗಿ ಬರುವ ಕನ್ನಡಿಗರ ಬಗ್ಗೆ ಮಾಡಬೇಕಾದ ಪೂರ್ವ ಸಿದ್ಧತೆ ಮತ್ತು ನೊಂದ ಕನ್ನಡಿಗರ ಪಯಣದ ಟಿಕೆಟ್ ವೆಚ್ಚ ಕೇಂದ್ರ ಅಥವಾ ರಾಜ್ಯ ಸರ್ಕಾರ ನೀಡಿ ಸಹಾಯ ಮಾಡಬೇಕೆಂದು ಸಭೆ ರಾಜ್ಯ ಹಾಗು ಕೇಂದ್ರ ಸರಕಾರಕ್ಕೆ ಮನವಿ ಮಾಡಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಇನ್ನಿತರ ಪದಾಧಿಕಾರಿಗಳಾದ ಮುಹಮ್ಮದ್ ಅಲಿ ಉಚ್ಚಿಲ, ಸದನ್ ದಾಸ್, ದೀಪಕ್ , ಎಂ ಇ ಮೂಳೂರ್ , ಅಬ್ದುಲ್ ಲತೀಫ್ ಮುಲ್ಕಿ , ಡಾ. ಕಾಪು ಮುಹಮ್ಮದ್ , ಹರೀಶ್ ಕೋಡಿ, ಮೋಹನ್ , ಶಶಿಧರ್ ನಾಗರಾಜಪ್ಪ , ಅಲ್ತಾಫ್, ಪುಟ್ಟುರಾಜ್ ಗೌಡ ಹಾಗು ಅಬೂ ಮುಹಮ್ಮದ್ ಪಾಲ್ಗೊಂಡಿದ್ದರು.