ಬಹರೈನ್ ಕನ್ನಡ ಸಂಘದ ಪ್ರತಿನಿಧಿಗಳಿಂದ ಭಾರತೀಯ ದೂತಾವಾಸದ ಉನ್ನತ ಅಧಿಕಾರಿಯ ಭೇಟಿ
ಅನಿವಾಸಿ ಕನ್ನಡಿಗರ ಸಮಸ್ಯೆ, ಪರಿಹಾರ ಕಾರ್ಯಗಳ ಬಗ್ಗೆ ಚರ್ಚೆ
ಪಿ. ಕೆ. ಚೌಧರಿ, ಪ್ರದೀಪ್ ಶೆಟ್ಟಿ, ಮುಹಮ್ಮದ್ ಮನ್ಸೂರ್
ಬಹರೈನ್ : ಭಾರತೀಯ ದೂತಾವಾಸದ ಎರಡನೆಯ ಕಾರ್ಯದರ್ಶಿ ಪಿ.ಕೆ. ಚೌಧರಿ ಅವರು ಇಂದು ಬಹರೈನ್ ಕನ್ನಡ ಸಂಘದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಮತ್ತು ಹಿರಿಯ ಕನ್ನಡಿಗ, ಬಹರೈನಿನ ಪ್ರತಿಷ್ಠಿತ ಕೆಎಚ್ ಕೆ ಹೀರೋಸ್ ಫೌಂಡೇಷನ್ ಉಪಾಧ್ಯಕ್ಷರಾದ ಮುಹಮ್ಮದ್ ಮನ್ಸೂರ್ ಅವರನ್ನು ಭೇಟಿಯಾದರು.
ಕೊರೋನ ವೈರಸ್ ಭೀತಿಯ ಸಂದರ್ಭದಲ್ಲಿ ಬಹರೈನ್ ನಲ್ಲಿ ನೆಲೆಸಿರುವ ಭಾರತೀಯರ ಮತ್ತು ಕನ್ನಡಿಗರ ಸ್ಥಿತಿಗತಿ, ಸಮಸ್ಯೆಗಳು ಮತ್ತು ಪರಿಹಾರ ಕಾರ್ಯಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಆಹಾರ ಕಿಟ್ ವಿತರಣೆಯ ವಿಷಯ, ಸ್ವದೇಶಕ್ಕೆ ಮರಳಲು ಬಯಸುತ್ತಿರುವವರ ಕುರಿತಾಗಿಯೂ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
ಸಂಕಷ್ಟದಲ್ಲಿರುವ ಕನ್ನಡಿಗರನ್ನು ತಾಯ್ನಾಡಿಗೆ ಮರಳಿ ಕಳುಹಿಸುವುದರ ಕುರಿತು ಪ್ರಶ್ನಿಸಿದಾಗ, ಉಳಿದ ರಾಜ್ಯಕ್ಕೆ ಹೋಲಿಸಿದರೆ ತಾಯ್ನಾಡಿಗೆ ಮರಳಲು ಇಚ್ಚಿಸುತ್ತಿರುವ ಕನ್ನಡಿಗರ ಸಂಖ್ಯೆ ಕಡಿಮೆಯಾದರೂ, ಅತಿ ಶೀಘ್ರದಲ್ಲಿಯೇ ಅವರ ಪಟ್ಟಿ ತಯಾರಿಸಿ ಅದಕ್ಕೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಡೆಯುತ್ತಿದೆಯೆಂದು ಕಾರ್ಯದರ್ಶಿ ತಿಳಿಸಿದರು.
ಈ ಸಂದರ್ಭದಲ್ಲಿ ತೊಂದರೆಯಲ್ಲಿರುವ ಕನ್ನಡಿಗರು ತಮ್ಮನ್ನು ಸಂಪರ್ಕಿಸಬಹುದೆಂದು ಪ್ರದೀಪ್ ಶೆಟ್ಟಿ ಮತ್ತು ಮುಹಮ್ಮದ್ ಮನ್ಸೂರ್ ಕಾರ್ಯದರ್ಶಿಯವರಿಗೆ ತಿಳಿಸಿದರು.