ಗಲ್ಫ್ ಇಶಾರ’ ಅಕ್ಷರ ಕ್ರಾಂತಿಯ ಹೊಸ ರೂಪ : ಯು.ಟಿ. ಖಾದರ್
ದೋಹ, ಆ.17: ಕನ್ನಡ ಓದುಗರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ‘ಇಶಾರ’ದ ಆಗಮನದೊಂದಿಗೆ ಅನಿವಾಸಿ ಕನ್ನಡಿಗರಲ್ಲಿ ಕನ್ನಡ ಓದುವ ಕಲೆ ಹೆಚ್ಚಾಗಲಿದೆ. ಇಶಾರ ಪತ್ರಿಕೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪರಿಚಯಿಸಲು ಪ್ರಯತ್ನಿಸುವುದಾಗಿ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಅವರು ಕತಾರ್ ಕೆಸಿಎಫ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಗಲ್ಫ್ ಇಶಾರ’ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಮತ್ತು ರಾಜ್ಯ ವಕ್ಫ್ ಬೋರ್ಡ್ನ ಸದಸ್ಯ ಮೌಲಾನ ಎನ್.ಕೆ.ಎಂ. ಶಾಫಿ ಸಅದಿ ಮಾತನಾಡಿ, ಮಾಧ್ಯಮ ಸಮಾಜದ ಕಣ್ಣು ,ಅದು ಸಮಾಜಕ್ಕೆ ಅನುಕೂಲವಾಗಬೇಕೇ ಹೊರತು,ಸಮಾಜಕ್ಕೆ ಕಂಟಕವಾಗಬಾರದು. ಇತ್ತೀಚಿನ ದಿನಗಳಲ್ಲಿ ದೃಶ್ಯ, ಶ್ರಾವ್ಯ ಮಾಧ್ಯಮಗಳು ಮುಸ್ಲಿಮರನ್ನು ಭಯೋತ್ಪಾದಕರನ್ನಾಗಿಸುವ ಸ್ಪರ್ಧೆಯಲ್ಲಿ ತೊಡಗಿಕೊಂಡಿದ್ದು, ಜಗತ್ತಿಗೆ ಶಾಂತಿ,ಸಹನೆ,ಸಹಿಷ್ಣುತೆಯ ಸಂದೇಶವನ್ನು ಸಾರಿದ ಪ್ರವಾದಿಯವರನ್ನು ನಿಂದಿಸುವ ಮಟ್ಟಕ್ಕೆ ಇಳಿದು ತನ್ನ ಕೊಳಕು ಮನಸ್ಸುಗಳನ್ನು ಅಕ್ಷರ ರೂಪಕ್ಕೆ ತರಲು ಹತಾಶ ಪ್ರಯತ್ನ ನಡೆಸುತ್ತಿರುವುದು ಪತ್ರಿಕಾ ಧರ್ಮದ ಅಣಕು ಎಂದರು.
ಕತಾರ್ ಕೆಸಿಎಫ್ ರಾಷ್ಟ್ರಾಧ್ಯಕ್ಷ ಹಾಫಿಝ್ ಫಾರೂಕ್ ಸಖಾಫಿ ಎಮ್ಮೆಮಾಡು ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಶಿಹಾಬುದ್ದೀನ್ ಮಶ್ಹೂರ್ ತಂಙಳ್ ತಲಕ್ಕಿ ದುಆ ನೆರವೇರಿಸಿದರು .
ಕಾರ್ಯಕ್ರಮದಲ್ಲಿ ಐಸಿಎಫ್ ಅಧ್ಯಕ್ಷ ಅಬ್ದುರ್ರಝಾಕ್ ಮುಸ್ಲಿಯಾರ್, ಡಾ.ಸಮೀರ್ ಮುಪನ್ ಅಸ್ಟರ್, ಕತಾರ್ನ ಉದ್ಯಮಿಗಳಾದ ನಿಯಾಝ್ ಅಹ್ಮದ್ ಚಿಕ್ಕಮಗಳೂರು, ಮೋನು ಅಬ್ದುಲ್ಲಾ, ತುಳುನಾಡ ಸಂಘದ ರವಿಶೆಟ್ಟಿ, ಐಸಿಬಿಎಫ್ ಅಧ್ಯಕ್ಷ ಅರವಿಂದ ಪಾಟೀಲ್,ಎಸ್ಕೆಎಂಡಬ್ಲ್ಯೂಎ ಅಧ್ಯಕ್ಷ ಸುಹೈಬ್ ಅಹ್ಮದ್, ಇಬ್ರಾಹೀಂ ಬ್ಯಾರಿ, ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಜಬ್ಬಾರ್ ಬೋಳಿಯಾರ್, ಕೆಸಿಎಫ್ ನಾಯಕರಾದ ಸತ್ತಾರ್ ಗಂಗೊಳ್ಳಿ, ಅಶ್ರಫ್ ಮುಡಿಪು, ಅಂದುಮಯಿ ನಾವುಂದ ಉಪಸ್ಥಿತರಿದ್ದರು.
ಕೆಸಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ಸಂಘಟಕ ಅಬ್ದುರ್ರಹೀಂ ಸಅದಿ ಪಾಣೆಮಂಗಳೂರು ಸ್ವಾಗತಿಸಿ, ವಂದಿಸಿದರು.