ಡಿಕೆಎಸ್ಸಿ ದಮ್ಮಾಮ್ ವಲಯ ವತಿಯಿಂದ ಕ್ಷೇಮನಿಧಿ ಸಮಿತಿಗೆ ಚಾಲನೆ
ಸುನ್ನೀ ಗೈಡನ್ಸ್ ಬ್ಯೂರೊ ಅಧ್ಯಕ್ಷ ಅಳಕೆಮಜಲು ಉಸ್ತಾದ್ರಿಗೆ ಸನ್ಮಾನ
ಜುಬೈಲ್, ಆ.29: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ದಮ್ಮಾಮ್ ವಲಯದ ವತಿಯಿಂದ ಸುನ್ನೀ ಗೈಡೆನ್ಸ್ ಬ್ಯೂರೋದ ಅಧ್ಯಕ್ಷ ಮುಹಮ್ಮದ್ ಖಾಸಿಮಿ ಅಳಕೆಮಜಲು ಅವರಿಗೆ ಸನ್ಮಾನ ಸಮಾರಂಭ ಹಾಗೂ ಕ್ಷೇಮನಿಧಿ ಸಮಿತಿಗೆ ಅಧಿಕೃತ ಚಾಲನೆ ಮತ್ತು ನಿಯಾಮವಳಿ ಬಿಡುಗಡೆ ಸಮಾರಂಭ ಜುಬೈಲ್ನ ಡಿಕೆಎಸ್ಸಿ ಆಡಿಟೊರಿಯಂನಲ್ಲಿ ಶುಕ್ರವಾರ ನಡೆಯಿತು.
ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಿನ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಸ್ತಾದ್ ಮುಹಮ್ಮದ್ ಖಾಸಿಮಿ, ವಲಯಾಧ್ಯಕ್ಷ ಸುಲೈಮಾನ್ ಸೂರಿಂಜೆ, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಬರ್ವ ಅವರು ಕ್ಷೇಮನಿಧಿ ಅಧ್ಯಕ್ಷ ಹಾತೀಂ ಕಂಚಿ, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಲ್ಲೂರ್, ಸಲಹೆಗಾರ ಹಾತೀಂ ಕುಳೂಳು ಅವರಿಗೆ ಕ್ಷೇಮನಿಧಿಯನ್ನು ನೀಡುವ ಮೂಲಕ ಕ್ಷೇಮನಿಧಿಗೆ ಚಾಲನೆ ನೀಡಿದರು.
ನಿಯಮಾವಳಿ ಮತ್ತು ನಿಬಂಧನೆ ಪತ್ರವನ್ನು ಉಸ್ತಾದ್ ಮುಹಮ್ಮದ್ ಖಾಸಿಮಿ ಮತ್ತು ಕೋಬರ್ ಘಟಾಕಾಧ್ಯಕ್ಷ ಅಬ್ದುರ್ರಹ್ಮಾನ್ ಪಾಣಾಜೆಯವರು, ಹಿರಿಯ ಉದ್ಯಮಿ ಮುಹಮ್ಮದ್ ಕಮ್ಮರಡಿಯವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿ, ಹಫ್ರುಲ್ ಬಾತಿನ್, ಅಲ್ ಹಸ್ಸಾ, ಅಲ್ ಕೋಬರ್, ತುಕ್ಬಾ, ದಮ್ಮಾಮ್, ಜುಬೈಲ್ ಮತ್ತು ಮುಝೈನ್ ಘಟಕದ ಮುಖಂಡರಿಗೆ ಹಸ್ತಾಂತರಿಸಿದರು. ಕ್ಷೇಮನಿಧಿಯ ಪ್ರಥಮ ಧನಸಹಾಯವಾಗಿ 2 ಲಕ್ಷ ರೂ.ನ್ನು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿರುವ ಸುನ್ನೀ ಸೆಂಟರ್ನ ದಮ್ಮಾಮ್ ಘಟಕದ ಸಕ್ರಿಯ ಕಾರ್ಯಕರ್ತ ಅಬ್ದುಲ್ ಅಝೀಝ್ ಕಂದಾವರರಿಗೆ ಅವರ ಸಂಬಂಧಿಕ ಅನ್ಸಾರ್ ಕಾನ ಅವರ ಮೂಲಕ ವಿತರಿಸಲಾಯಿತು.
ಈ ಸಂದರ್ಭ ಸುನ್ನೀ ಗೈಡೆನ್ಸ್ ಬ್ಯೂರೋ ಅಧ್ಯಕ್ಷ ಹಾಗೂ ಇಹ್ಸಾನ್ ಬನಾತ್ ಕೇರ್ನ ಪ್ರಾಂಶುಪಾಲ ಉಸ್ತಾದ್ ಮುಹಮ್ಮದ್ ಖಾಸಿಮಿ ಅಳಕೆಮಜಲು ಅವರನ್ನು ವಲಯಾಧ್ಯಕ್ಷ ಸುಲೈಮಾನ್ ಸೂರಿಂಜೆ, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಬರ್ವ ಮತ್ತು ಉಪಾಧ್ಯಕ್ಷ ಶೇಖ್ ಬಳ್ಕುಂಜೆಯವರು ಶಾಲು ಹೊದಿಸಿ, ಪವಿತ್ರ ಕುರ್ಆನ್ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ವಲಯ ಸಮಿತಿಯ 7 ಘಟಕಗಳ ಮುಖಂಡರು ಕ್ಷೇಮನಿಧಿ ಅಭಿವೃದ್ಧಿಯ ಬಗ್ಗೆ ಮಾತನಾಡಿದರು.
ಅಬ್ದುಲ್ಲತೀಫ್ ಸಖಾಫಿ ದುಆ ನೆರವೇರಿಸಿದರು. ಮಾಸ್ಟರ್ ಮುಹಮ್ಮದ್ ಮುಸ್ತಫಾ ಕಿರಾಅತ್ ಪಠಿಸಿದರು. ವೇದಿಕೆಯಲ್ಲಿ ಡಿಕೆಎಸ್ಸಿ ಮುಖಂಡರಾದ ಉಸ್ತಾದ್ ಅಬ್ದುಲ್ಲತೀಫ್ ಸಖಾಫಿ, ಹಫ್ರ್ ಲ್ ಬಾತಿನ್ ಉಪಾಧ್ಯಕ್ಷ ಮುಹಮ್ಮದ್ ಅಮ್ಮುಂಜೆ, ಹಿರಿಯರಾದ ಅನ್ವರ್ ಹುಸೈನ್ ಗೂಡಿನಬಳಿ, ಯುವ ಉದ್ಯಮಿ ಅಲ್ ಹಸ್ಸ ಉಪಾಧ್ಯಕ್ಷ ಸಿದ್ದೀಕ್ ಕಲ್ಲಡ್ಕ ಮತ್ತು ಹಲವಾರು ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.
ವಲಯಾಧ್ಯಕ್ಷ ಸುಲೈಮಾನ್ ಸೂರಿಂಜೆ ಸ್ವಾಗತಿಸಿದರು. ಕ್ಷೇಮನಿಧಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಅನ್ವರ್ ಹುಸೈನ್ ಗೂಡಿನಬಳಿ ವಂದಿಸಿದರು.