ದಮ್ಮಾಮ್: ಇಂಡಿಯನ್ ಸೋಶಿಯಲ್ ಫೋರಂನಿಂದ ‘ಆರ್ಟ್ ಬೀಟ್’
ದಮ್ಮಾಮ್, ನ.21: ಮಕ್ಕಳ ದಿನಾಚರಣೆಯ ಪ್ರಯುಕ್ತ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿಯು ಮಕ್ಕಳಿಗಾಗಿ ಆಯೋಜಿಸಿದ್ದ ’ಬಣ್ಣ ಹಚ್ಚುವ’ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಿತ್ತು.
‘ಆರ್ಟ್ ಬೀಟ್’ ಹೆಸರಿನಲ್ಲಿ ಆಯೋಜಿಸಲಾದ ಚಿತ್ರಕ್ಕೆ ಬಣ್ಣ ಹಚ್ಚುವ ಸ್ಫರ್ಧೆಯಲ್ಲಿ ಎಲ್ ಕೆಜಿ , ಯುಕೆಜಿ ಮತ್ತು ಪ್ರಥಮ ತರಗತಿಯ ಚಿಣ್ಣರು ಭಾಗವಹಿಸಿದ್ದು, ಅರಬ್ ಜಗತ್ತಿನ ಹೆಸರಾಂತ ಮಳಿಗೆ ’ಲುಲು ಹೈಪರ್ ಮಾರ್ಕೆಟ್’ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು.
ನ.14ರಂದು ಲುಲು ಹೈಪರ್ ಮಾರ್ಕೆಟ್-ಜುಬೈಲ್ನಲ್ಲಿ ನಡೆದ ’ಆರ್ಟ್ಬೀಟ್’ ಸ್ಪರ್ಧೆಯಲ್ಲಿ 81 ಮಕ್ಕಳು ಭಾಗವಹಿಸಿದ್ದು, ಮಹೂಮ್ ಆರಿಫ್, ಎಲಿಜಬೆತ್ ಮತ್ತು ಜಿದಾ ಆಸಿಫ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದರು.
ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಸಮಿತಿಯ ಅಧ್ಯಕ್ಷ ವಾಸಿಮ್ ರಬ್ಬಾನಿ, ಜುಬೈಲ್ ಇಂಡಿಯನ್ ಇಂಟರ್ ನ್ಯಾಶನಲ್ ಸ್ಕೂಲ್ ಪ್ರಾಂಶುಪಾಲ ಡಾ.ಹಾಮಿದ್ ಹಾಗೂ ಲುಲು ಹೈಪರ್ ಮಾರ್ಕೆಟ್ ಜುಬೈಲ್ ಇದರ ಜನರಲ್ ಮ್ಯಾನೇಜರ್ ಅಕ್ಬರ್ ಸೈದು ಮುಹಮ್ಮದ್ ವಿಜೇತರಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.
ನ.17ರಂದು ಲುಲು ಹೈಪರ್ ಮಾರ್ಕೆಟ್-ಖೋಬರ್ನಲ್ಲಿ ನಡೆದ ‘ಆರ್ಟ್ ಬೀಟ್’ ಸ್ಪರ್ಧೆಯಲ್ಲಿ 106 ಮಕ್ಕಳು ಭಾಗವಹಿಸಿದ್ದು, ಸೆಜಾ ಮರ್ಯಮ್, ಸಾನ್ವಿ ಸಿ., ಅರೀಜ್ ಅಬ್ದುಲ್ ಮತೀನ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದರು.
ಮುಖ್ಯ ಅತಿಥಿಗಳಾಗಿ ಇಂಡಿಯನ್ ಸೋಶಿಯಲ್ ಫೋರಂ ಕೇಂದ್ರ ಸಮಿತಿಯ ಅಧ್ಯಕ್ಷ ವಾಸಿಮ್ ರಬ್ಬಾನಿ, ಇಂಡಿಯನ್ ಇಂಟರ್ ನ್ಯಾಶನಲ್ ಸ್ಕೂಲ್ ಖೋಬರ್ ಪ್ರಾಂಶುಪಾಲ ಡಾ ಇ. ಮುಹಮ್ಮದ್ ಶಾಫಿ ಹಾಗೂ ಲುಲು ಹೈಪರ್ ಮಾರ್ಕೆಟ್ ಖೋಬರ್ ಇದರ ಜನರಲ್ ಮ್ಯಾನೇಜರ್ ಮುಹಮ್ಮದ್ ರಫೀಕ್ ವಿಜೇತರಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.
ಅನಿವಾಸಿ ಭಾರತೀಯ ಮಕ್ಕಳಿಗೆ ಸಂಭ್ರಮದ ದಿನಾಚರಣೆ ನಡೆಸಲು ಸಹಕಾರ ನೀಡಿದ ಲುಲು ಹೈಪರ್ ಮಾರ್ಕೆಟ್ ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಂಡಿಯನ್ ಸ್ಕೂಲುಗಳ ಪ್ರಾಂಶುಪಾಲರನ್ನು ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯ ಮುಹಮ್ಮದ್ ಅಝರುದ್ದೀನ್ ಕಾರ್ಯಕ್ರಮ ನಿರೂಪಿಸಿದರು.