ಸಂವಿಧಾನ ಉಳಿವಿಗಾಗಿ ಹೋರಾಟ ವರ್ತಮಾನದ ದೇಶಪ್ರೇಮ : ಇಂಡಿಯನ್ ಸೋಶಿಯಲ್ ಫೋರಂ
ದಮಾಮ್ , ಜ.25 : ವಿವಿಧತೆಯಲ್ಲಿ ಏಕತೆ ಎಂಬುದು ಭಾರತದ ಶಕ್ತಿಯಾಗಿದ್ದು, ಜಾಗತಿಕವಾಗಿ ನಮ್ಮ ದೇಶವು ಅನನ್ಯ ಜಾತ್ಯತೀತ ರಾಷ್ಟ್ರವಾಗಿ ಗುರುತಿಸುತ್ತಿದೆ. ಡಾ.ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನವು ದೇಶದ ಜಾತ್ಯತೀತ ವ್ಯವಸ್ಥೆಯನ್ನು ನಿರೂಪಿಸುತ್ತಿದೆ. ಸಂವಿಧಾನದ ಉಳಿವು ಅದು ದೇಶದ ಜಾತ್ಯತೀತ ಪರಂಪರೆ ಮತ್ತು ಬಹುಸಂಸ್ಕೃತಿಯ ಉಳಿವು ಆಗಿದೆ. ಸಂವಿಧಾನದ ಉಳಿವಿಗಾಗಿ, ಹಕ್ಕುಗಳಿಗಾಗಿ ಹೋರಾಟ ನಡೆಸುವುದು ವರ್ತಮಾನದ ದೇಶಪ್ರೇಮವಾಗಿದೆ. ಈ ಬಾರಿಯ ಗಣರಾಜ್ಯೋತ್ಸವವು ಈ ರೀತಿಯ ದೇಶಪ್ರೇಮಕ್ಕೆ ಪ್ರೇರಣೆಯಾಗಲಿ ಎಂದು ಇಂಡಿಯನ್ ಸೋಶಿಯಲ್ ಫೋರಂ, ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ರಾಜ್ಯ ಸಮಿತಿಯು ಹಾರೈಸುತ್ತದೆ.
ಸಾಮಾಜಿಕ ನ್ಯಾಯ ಎಂಬುದು ಸಂವಿಧಾನದ ಮೂಲ ಧ್ಯೇಯವಾಗಿದ್ದು, ಇಂದು ಅದು ಎಲ್ಲ ಕ್ಷೇತ್ರಗಳಲ್ಲಿ ಜಾತಿ, ಧರ್ಮ, ವರ್ಗಗಳ ಹೆಸರಿನಲ್ಲಿ ನಿರಾಕರಿಸಲ್ಪಡುತ್ತಿರುವುದನ್ನು ದೇಶದಲ್ಲಿ ಕಾಣುತ್ತಿದ್ದೇವೆ. ಮಾನವಪರ ಕಾಳಜಿಯುಳ್ಳ ನಮ್ಮ ಸಂವಿಧಾನವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವಾಗಿದೆ. ಪ್ರಸಕ್ತ ಭಾರತದಲ್ಲಿ ಜನಸಾಮಾನ್ಯರು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು, ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದ ಹೊರತಾಗಿ ಸಾಮಾಜಿಕ ನ್ಯಾಯವನ್ನು ಖಾತರಿಪಡಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಂವಿಧಾನದ ಧ್ಯೇಯೋದ್ದೇಶ, ಆಶೋತ್ತರಗಳನ್ನು ಕಾರ್ಯರೂಪಕ್ಕೆ ತರಲು ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಸಮಿತಿಯು ಕರೆ ನೀಡುತ್ತದೆ.