ಜಿದ್ದಾ: ಕಬಡ್ಡಿ ಲೀಗ್-2017 ಉದ್ಘಾಟನೆ
ಸೌದಿ ಅರೇಬಿಯಾ/ಜಿದ್ದಾ. ಮಾ.10: ಸಾಕೋ ಮತ್ತು ಭಟ್ಕಳ ಕಮ್ಯುನಿಟಿ ಜಿದ್ದಾ ಸಹಯೋಗದೊಂದಿಗೆ ಎನ್ಆರ್ಐ ಸ್ಪೋಟ್ಸ್ ಫೆಡರೇಶನ್ ಕೆ.ಎಸ್.ಎ ಆಯೋಜಿಸುತ್ತಿರುವ ಕಬಡ್ಡಿ ಲೀಗ್-2017 ಇಂದು(ಶುಕ್ರವಾರ) ಸಂಜೆ 4ಕ್ಕೆ ಜಿದ್ದಾದ ಶಬಾಬಿಯಾ ಮೈದಾನದಲ್ಲಿ ಚಾಲನೆಗೊಂಡಿದೆ.
ಜಿದ್ದಾದ ಭಾರತೀಯ ರಾಯಭಾರಿ ಆನಂದ್ ಕುಮಾರ್ ಪಾರಿವಾಳ ಹಾರಿಸುವ ಮೂಲಕ ಪಂದ್ಯಾಕೂಟ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ಕಬಡ್ಡಿಯಲ್ಲಿ ಪ್ರಮುಖ ನಿರ್ವಹಣೆಯನ್ನು ತೋರುವ ತಂಡವಾಗಿದ್ದು, ಹಲವು ಬಾರಿ ಚಾಂಪಿಯನ್ಶಿಫ್ ಗೆದ್ದುಕೊಂಡಿದೆ. ಆದರೆ ಸೌದಿ ಅರೇಬಿಯಾದಲ್ಲಿ ಎಂದಿಗೂ ಈ ಕ್ರೀಡೆಯನ್ನು ಕಾಣುವುದು ಸಾಧ್ಯವಿರಲಿಲ್ಲ. ಭಾರತದ ಈ ಮಣ್ಣಿನ ಆಟವನ್ನು ಸೌದಿ ಅರೇಬಿಯಾದಲ್ಲಿ ಪ್ರಚುರಪಡಿಸುವ ಎನ್.ಆರ್.ಐ ಸ್ಪೋಟ್ಸ್ ಫೆಡರೇಶನ್ ನ ಈ ಪ್ರಯತ್ನವು ಶ್ಲಾಘನೀಯವಾಗಿದೆ ಎಂದರು.
ವೇದಿಕೆಯಲ್ಲಿ ಇಂಡಿಯನ್ ಸೋಶಿಯಲ್ ಫಾರಂ, ಪಶ್ಚಿಮ ವಲಯ ಅಧ್ಯಕ್ಷರಾದ ಅಶ್ರಫ್ ಮರಯೂರ್, ಭಟ್ಕಳ್ ಕಮ್ಯೂನಿಟಿ ಜಿದ್ದಾ ಅಧ್ಯಕ್ಷರಾದ ನೌಮನ್ ಅಲಿ ಅಕ್ಬರ್, ಇಂಡಿಯಾ ಫ್ರೆಟರ್ನಿಟಿ ಫಾರಂ-ಪಶ್ಚಿಮ ವಲಯ ಜಿದ್ದಾ ಅಧ್ಯಕ್ಷರಾದ ಫೈಝುದ್ದೀನ್, ಯೂಸುಫ್ ಅಲ್ ರೂಖ್ ನ ಪ್ರಧಾನ ವ್ಯಪಸ್ಥಾಪಕ ಮಲ್ಲಪ್ಪನ್, ಐಪಿಡಬ್ಲ್ಯೂಎಫ್ ಪ್ರಧಾನ ಕಾರ್ಯದರ್ಶಿ ಕಮರ್ ಸಾದಾ, ರೋಶನ್ ರೋಡಿಗ್ರಸ್, ಖಲೀಲ್ ಉರ್ರಹ್ಮಾನ್, ಹಿದಾಯ ಫೌಂಡೇಶನ್ ಅಧ್ಯಕ್ಷರಾದ ಅಬ್ದುಲ್ ಅಝೀರ್, ಉಪಸ್ಥಿತರಿದ್ದರು.
ಎನ್.ಆರ್.ಐ ಸ್ಪೋಟ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಅಕ್ಬರ್ ಕಲ್ಲಡ್ಕ ಸ್ವಾಗತಿಸಿ, ಇಲ್ಯಾಸ್ ಪಡುಬಿದ್ರೆ ವಂದಿಸಿ, ಮುಹಮ್ಮದ್ ಅಲಿ ಮುಳೂರು ಕಾರ್ಯಕ್ರಮ ನಿರೂಪಿಸಿದರು.