ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಂನ 6ನೆ ಸಾಲಿನ ಸಾಮಾನ್ಯ ಸಭೆ
ಅಬುಧಾಬಿ, ಮೇ14: ಸಾಮಾಜಿಕ ಸಂಘಟನೆಯಾದ ಬ್ಯಾರೀಸ್ ವೆಲ್ಫೇರ್ ಫೋರಂ(ಬಿಡಬ್ಲ್ಯುಎಫ್) ಅಬುಧಾಬಿ ಇದರ 6ನೆ ಸಾಲಿನ ಸಾಮಾನ್ಯ ಸಭೆಯು ಅಬುಧಾಬಿಯಲ್ಲಿ ನಡೆಯಿತು.
ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಮುದಾಯ ಸೇವೆಯಲ್ಲಿ ತೊಡಗಿಸಿಕೊಂಡ ಬಿಡಬ್ಲ್ಯುಎಫ್ ಸದಸ್ಯರನ್ನು, ಪದಾಧಿಕಾರಿಗಳನ್ನು ಅಭಿನಂದಿಸಿದರು.
ಬಡ ಹೆಣ್ಮಕ್ಕಳ ಸಾಮೂಹಿಕ ವಿವಾಹ, ವರದಕ್ಷಿಣೆ ವಿರೋಧಿ ವಿವಾಹ ಹಾಗೂ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ಬಿಡಬ್ಲ್ಯುಎಫ್ ನ ಎಲ್ಲಾ ಚಟುವಟಿಕೆಗಳಿಗೂ ಬೆನ್ನೆಲುಬಾಗಿ ನಿಂತ ಸಚಿವ ಯು.ಟಿ ಖಾದರ್ ಹಾಗೂ ಸಾಮೂಹಿಕ ವಿವಾಹದ ಕಾರ್ಯಕ್ರಮದ ಸಂಘಟಕರು, ಕನ್ವೀನರ್ ಗಳು ಹಾಗೂ ಸದಸ್ಯರಿಗೆ ಚಿರ ಋಣಿ ಎಂದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ 2015-17ನೆ ಸಾಲಿನ ವರದಿ ಮಂಡಿಸಿ ಸಮುದಾಯದ ಬಡವರು ಹಾಗೂ ಅರ್ಹರಿಗೆ ಸೌಲಭ್ಯಗಳನ್ನು ಒದಗಿಸುವ ಬಿಡಬ್ಲ್ಯುಎಫ್ ನ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಖಜಾಂಚಿ ಮುಹಮ್ಮದ್ ಸಿದ್ದೀಕ್ ವಾರ್ಷಿಕ ವರದಿ ಹಾಗೂ ಆಡಿಟರ್ ಅಬ್ದುಲ್ ಮಜೀದ್ ಆಡಿಟರ್ ವರದಿಯನ್ನು ಮಂಡಿಸಿದರು.
ಮಂಗಳೂರಿನಲ್ಲಿ ಬಿಡಬ್ಲ್ಯು ಎಫ್ ವತಿಯಿಂದ ನಡೆದ 6ನೆ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲಾ ಸದಸ್ಯರನ್ನು ಅಭಿನಂದಿಸಲಾಯಿತು.
ಇದೇ ಸಂದರ್ಭ ಹಳೆಯ ಸಮಿತಿಯನ್ನು ಬರ್ಖಾಸ್ತುಗೊಳಿಸಿ ಅಬ್ದುಲ್ಲಾ ಮದುಮೂಲೆ ಹಾಗೂ ಜಲೀಲ್ ಕೃಷ್ಣಾಪುರ ಅವರ ಮಾರ್ಗದರ್ಶನದಲ್ಲಿ 25 ಸದಸ್ಯರ ನೂತನ ಕಾರ್ಯನಿರ್ವಾಹಕ ಸಮಿತಿಯನ್ನು ರಚಿಸಲಾಯಿತು.
ಮೊಯ್ದಿನ್ ಹಂಝಲ್ ಕಿರಾಅತ್ ಪಠಿಸಿದರು. ಬಿಡಬ್ಲ್ಯುಎಫ್ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಕೃಷ್ಣಾಪುರ ಸ್ವಾಗತಿಸಿದರು. ನಝೀರ್ ಉಬಾರ್ ವಂದಿಸಿದರು.