ಇಂಡಿಯನ್ ಸೋಶಿಯಲ್ ಫೋರಮ್ ಸತತ ಪ್ರಯತ್ನ: ಕೃಷ್ಣ ಕುಮಾರ್ ಮೃತದೇಹ ಹುಟ್ಟೂರಿಗೆ
ಸೌದಿ ಅರೇಬಿಯಾ, ಮೇ 24: ಕರ್ನಾಟಕ ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರ ನೆರವಿನಿಂದ ಕಳೆದ ಹನ್ನೊಂದು ತಿಂಗಳುಗಳ ಕಾಲ ಕಡತ ವಿಲೇವಾರಿಯಾಗದೆ ಆಸ್ಪತ್ರೆಯ ಶವಾಗಾರದಲ್ಲಿದ್ದ ಕೃಷ್ಣ ಕುಮಾರ್ ಅವರ ಮೃತದೇಹವು ಭಾರತ ತಲುಪಿ ಕುಟುಂಬಸ್ಥರ ಸಮಾಧಾನಕ್ಕೆ ಕಾರಣವಾಗಿದೆ.
ಸೌದಿ ಅರೇಬಿಯಾದ ಕಾನೂನಿನ ಪ್ರಕಾರ ಮೃತದೇಹ ರವಾನೆಗೆ ಬೇಕಾಗಿದ್ದ ಎಲ್ಲಾ ಕಡತಗಳು ಮತ್ತು ಮೃತ ದೇಹ ರವಾನೆಗೆ ತೊಡಕಾಗಿದ್ದ ವೀಸಾ ಮಾಲಕ ಕೇಂದ್ರ ವಿದೇಶಾಂಗ ಇಲಾಖೆಯ ಮನವಿಗೂ ಸ್ಪಂದಿಸದಿದ್ದಾಗ ಕೊನೆಗೆ ಇಂಡಿಯನ್ ಸೋಶಿಯಲ್ ಪೋರಂ ಕರ್ನಾಟಕ ಘಟಕವು ಕಡತಗಳನ್ನು ಸರಿಪಡಿಸಿ ಮೃತದೇಹವನ್ನು ಭಾರತ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಈ ಕಾರ್ಯಾಚರಣೆಯಲ್ಲಿ ಮಹಮ್ಮದ್ ಬಾವ ಕೆಸಿ ರೋಡ್ ನೇತೃತ್ವದಲ್ಲಿ ಕಲಂದರ್ ನೌಶಾದ್ ಕರ್ನಿರೆ, ಶಾಹುಲ್ ಹಮೀದ್ ಕಾಶಿಪಟ್ನ ಕಳೆದ ನಾಲ್ಕು ತಿಂಗಳುಗಳಿಂದ ಸೌದಿ ಅರೇಬಿಯಾದ ಜೇಸಾನ್ ನ ಸರಕಾಇ ಕಚೇರಿ, ನ್ಯಾಯಾಲಯ, ಪೊಲೀಸ್ ಇಲಾಖೆ, ಸೌದಿ ಅಮೀರ್ ರ ಕಚೇರಿಗೆ ಅಲೆದಾಡಿ ಕೊನೆಗೂ ಯಶಸ್ವಿಯಾದರು. ಇವರಿಗೆ ಜಿದ್ದ ಭಾರತ ರಾಯಭಾರಿ ಕಚೇರಿಯ ಕಾನ್ಸುಲೇಟ್ ಸದಸ್ಯರು ಆಗಿರುವ ಹನೀಫ್ ಮಂಜೇಶ್ವರ ಇವರು ಸೂಕ್ತ ಮಾರ್ಗದರ್ಶನ ನೀಡಿದ್ದರು.
ಘಟನೆಯ ಹಿನ್ನಲೆ:
ಸೌದಿ ಅರೇಬಿಯಾದ ಅಶೀರ್ ಪ್ರಾಂತ್ಯದ ಜೀಸಾನ್ ನ ಸಬಿಯ ಎಂಬಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದ ಕೃಷ್ಣ ಕುಮಾರ್ ಎಂಬವರು ತನ್ನ ವೀಸಾ ಮಾಲಕನ ( ಕಫೀಲ್ ) ನ ಪೆಟ್ರೋಲ್ ಬಂಕ್ ಹಾಗೂ ಸೂಪರ್ ಮಾರ್ಕೆಟ್ ಒಂದನ್ನು ನೋಡಿಕೊಳ್ಳುವ ಮೇಲುಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದರು. ಆಷ್ಟೇ ಅಲ್ಲದೆ ಇತರ ಉದ್ಯಮ ನಡೆಸುವುದ್ದಕ್ಕಾಗಿ ಕಫೀಲ್ ಬಳಿಯಿಂದ ಸುಮಾರು ಹತ್ತು ಲಕ್ಷ ರೂಪಾಯಿಗಳಷ್ಟು (60,000 ಸೌದಿ ರಿಯಾಲ್) ಸಾಲವಾಗಿ ಸೌದಿ ನಿಯಮಾವಳಿಗಳ ಪ್ರಕಾರ ಅಂದರೆ ಸಾಕ್ಷಿಗಳ ಸಮ್ಮುಖದಲ್ಲಿ ಪಡೆದಿದ್ದರು. ತನ್ನ ಉದ್ಯಮದಲ್ಲಿ ಸೋತು ನೆಲಕಚ್ಚಿದ ಕುಮಾರ್ ರಿಗೆ ಕೊಟ್ಟ ಸಾಲವನ್ನು ತೀರಿಸುವಂತೆ ಕಫೀಲ್ ಒತ್ತಡ ಹೇರುತ್ತಿದ್ದ ಕೊನೆಗೆ ಸಾಲವೂ ತೀರಿಸಲಾಗದೆ ಒತ್ತಡ ಸಹಿಸಲಾಗದೆ ತನ್ನ ಕೊಠಡಿಯಲ್ಲಿ 2016ನೆ ಜೂನ್ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೃತದೇಹ ಭಾರತಕ್ಕೆ ಕಳುಹಿಸುವ ಪ್ರಕ್ರಿಯೆಗೆ ಕೇರಳ ಮೂಲದ ಎಲ್ಲ ಸಂಘಟನೆಗಳು ಮೊದಲಾಗಿ ಪ್ರಯತ್ನ ಪಟ್ಟರೂ 60,000 ರಿಯಾಲ್ ನೀಡದೆ ಕಳುಹಿಸುವುದಿಲ್ಲ ಎಂಬುವುದು ಕಫೀಲ್ ನ ಉತ್ತರವಾಗಿತ್ತು ಮತ್ತು ಆತ ಯಾರ ಮನವಿಗೂ ಕಿವಿಗೊಡುತ್ತಿರಲಿಲ್ಲ.
ಭಾರತದಿಂದ ಇಷ್ಟೊಂದು ದೊಡ್ಡ ಮೊತ್ತವನ್ನು ಬಡವರಾಗಿರುವ ಕೃಷ್ಣ ಕುಮಾರ್ ಕುಟುಂಬಕ್ಕೆ ಹೊಂದಿಸಲು ಸಾಧ್ಯವಾಗದೆ ಇದ್ದುದರಿಂದ ಕೇರಳ ಮೂಲದ ಕೆಲವು ಸಂಘಟನೆಗಳು ಸೌದಿ ಕಾನೂನಿನ ಪ್ರಕಾರ ಮುಂದುವರೆದರೂ ವೀಸಾ ಮಾಲಕನ ಮಾತಿನ ಮುಂದೆ ಅವರ ಯಾವ ಪ್ರಯತ್ನವೂ ಫಲ ಕೊಡಲಿಲ್ಲ. ಕೊನೆಗೆ ಭಾರತದ ರಾಯಭಾರ ಕಚೇರಿ, ಭಾರತದ ವಿದೇಶಾಂಗ ಇಲಾಖೆ ಮೂಲಕ ಒತ್ತಡ ಹೇರಿದರೂ ಕಫೀಲ್ ಒಪ್ಪಲಿಲ್ಲ. ಕೇರಳದ ಸಂಘಟನೆಯೊಂದರ ಪದಾಧಿಕಾರಿಗಳು ಸೌದಿ ಅರೇಬಿಯಾದ ಖಮೀಸ್ ಮುಶಾಯ್ತ್, ಅಭಾ ಪ್ರಾಂತ್ಯದಲ್ಲಿ ಕಳೆದ 30 ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿರುವ ಇಂಡಿಯನ್ ಸೋಶಿಯಲ್ ಫೋರಮ್ ನ ಮುಹಮ್ಮದ್ ಬಾವ ಕೆಸಿ ರೋಡ್ ರನ್ನು ಸಂಪರ್ಕಿಸುತ್ತಾರೆ.
ಕುಮಾರ್ ಅವರ ಪತ್ನಿ ಹಾಗೂ ಪುತ್ರನ ಒಪ್ಪಿಗೆಯಂತೆ ವಾಕಾಲ ಪಡೆದ ಮಹಮ್ಮದ್ ಬಾವ ಕೆಸಿ ರೋಡ್, ಖಲಂದರ್ ನೌಶಾದ್ ಕರ್ನಿರೆ ಹಾಗೂ ಶಾಹುಲ್ ಹಮೀದ್ ಕಾಶಿಪಟ್ನ, ಇವರ ತಂಡವನ್ನು ರಚಿಸಿ ಕೃಷ್ಣ ಕುಮಾರ್ ಕುಟುಂಬದೊಂದಿಗೆ ನಿರಂತರ ಸಂಪರ್ಕದೊಂದಿಗೆ ಸೌದಿ ಅರೇಬಿಯಾದ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಮೃತದೇಹ ಸಂರಕ್ಷಿಸಿದ ಆಸ್ಪತ್ರೆಯ ಬಿಲ್ ಹಾಗೂ ಭಾರತಕ್ಕೆ ತಲುಪಿಸುವ ಕಾರ್ಗೋ ವೆಚ್ಚವನ್ನು ತಾನೇ ನೀಡುವುದಾಗಿ ಒಪ್ಪಿಕೊಂಡು ಸೌದಿ ಪೊಲೀಸ್ ಇಲಾಖೆಯ ಮುಂದಿನ ತನಿಖೆಗೆ ಸಹಕಾರಿಯಾಗುವಂತೆ ಮಾಡಲಾಯಿತು.
ಮೃತದೇಹ ಶೇಖರಣೆಗೆ ತಗುಲಿದ ಆಸ್ಪತ್ರೆಯ ವೆಚ್ಚವನ್ನು ಮತ್ತು ಹುಟ್ಟೂರಿಗೆ ರವಾನಿಸಲಾಗುವ ಕಾರ್ಗೋ ವೆಚ್ಚವನ್ನು ವೀಸಾ ಮಾಲಕನ ಮೂಲಕ ಪಡೆದು ಕಳೆದ 10-11 ತಿಂಗಳುಗಳಿಂದ ಆಸ್ಪತ್ರೆಯಲ್ಲಿದ್ದ ಮೃತದೇಹವನ್ನು ಕೇರಳದ ಮವ್ವಾನಾಡಿನ ಹುಟ್ಟೂರು ತಲುಪಿಸುವಲ್ಲಿ ಯಶಸ್ವಿಯಾದರು.
ಇಂಡಿಯನ್ ಸೋಶಿಯಲ್ ಫೋರಮ್ ನ ತಂಡದ ಈ ಕಾರ್ಯವನ್ನು ಕೃಷ್ಣ ಕುಮಾರ್ ಅಕಾಲಿಕ ನಿಧನದಿಂದ ಹಾಗೂ ಮೃತದೇಹ ಪಡೆಯಲು ಇದ್ದ ತೊಡಕುಗಳಿಂದ ಕಂಗಾಲಾಗಿದ್ದ ಅವರ ಪತ್ನಿ ಹಾಗೂ ಪುತ್ರ ಸಚಿನ್ ರವರು ಇಂಡಿಯನ್ ಸೋಶಿಯಲ್ ಫೋರಮ್ ನ ಸಹಕಾರಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಹಾಗೂ ಮೃತದೇಹ ಭಾರತ ತಲುಪಲಿದ್ದು, ಮವ್ವನಾಡಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.