ಮದೀನಾ ತಲುಪಿದ ಭಾರತದ ಹಜ್ ಯಾತ್ರಾರ್ಥಿಗಳ ಮೊದಲ ತಂಡ
ಸೌದಿ ಅರೇಬಿಯಾ (ಮದೀನಾ ಮುನವ್ವರ), ಜು.24: ಪವಿತ್ರ ಹಜ್ ಕರ್ಮ ನಿರ್ವಹಿಸಲು ಭಾರತದಿಂದ ತೆರಳಿದ್ದ ಯಾತ್ರಾರ್ಥಿಗಳಿದ್ದ ಮೊದಲ ವಿಮಾನವು ಮದೀನಾ ಮುನವ್ವರದ ಕಿಂಗ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣ ತಲುಪಿದೆ.
ಕೆಸಿಎಫ್ ಮದೀನಾ ಕಾರ್ಯಕರ್ತರು ಮದೀನಾ ತಲುಪಿದ ಯಾತ್ರಾರ್ಥಿಗಳನ್ನು ಖರ್ಜೂರ, ನೀರು ನೀಡಿ ಸ್ವಾಗತಿಸಿದರು. ಗೋವಾ, ಕುಮಟಾ, ಭಟ್ಕಳ, ದಾವಣಗೆರೆ, ಹೊನ್ನಾವರ, ಬೆಳಗಾಂ ಸೇರಿದಂತೆ ಮೊದಲ ವಿಮಾನದಲ್ಲಿ ಭಾರತದ ಒಟ್ಟು 420 ಯಾತ್ರಾರ್ಥಿಗಳಿದ್ದರು.
ಈ ಸಂದರ್ಭ ಇಸ್ಮಾಯಿಲ್ ಸಿದ್ದೀಕ್ ಭಟ್ಕಳ್ ಮಾತನಾಡಿ, ದೇಶವನ್ನು ಪ್ರೀತಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇದು ಪ್ರವಾದಿ ಮುಹಮ್ಮದ್(ಸ.ಅ) ಅವರ ಸಂದೇಶವಾಗಿದೆ. ಭಾರತದಲ್ಲಿ ಕೋಮು ಸಾಮರಸ್ಯ ಉಳಿಯಲು ಮಕ್ಕಾ ಮದೀನಾದಲ್ಲಿ ವಿಶೇಷವಾಗಿ ಪ್ರಾರ್ಥಿಸುತ್ತೇವೆ ಎಂದರು.
ಈ ವೇಳೆ ಕೆಸಿಎಫ್ ಮದೀನಾ ಝೋನಲ್ ಎಚ್.ವಿ.ಸಿ ಚೇರ್ಮೆನ್ ತಾಜುದ್ದೀನ್ ಸುಳ್ಯ, ಕನ್ವೀನರ್ ರಝಾಕ್ ಸಂತೋಷ್ ನಗರ, ಜಬ್ಬಾರ್ ಕಾವಳಕಟ್ಟೆ, ಮತ್ತಿತರ ಕೆಸಿಎಫ್ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಹಕೀಂ ಬೋಳಾರ್