ಕ್ಯು.ಐ.ಎಸ್.ಎಫ್. ಕರ್ನಾಟಕ ಘಟಕದಿಂದ "ಗೌರಿ ಲಂಕೇಶ್ ಹತ್ಯೆ ಕುರಿತು ವಿಚಾರ ಸಂಕಿರಣ"
ಕತರ್, ಅ.14: ಕತರ್ ಇಂಡಿಯನ್ ಸೋಶಿಯಲ್ ಫೋರಮ್(ಕ್ಯು.ಐ.ಎಸ್.ಎಫ್.) ವತಿಯಿಂದ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯ ವಿರುದ್ಧ "ಗೌರಿ ಲಂಕೇಶ್ ಹತ್ಯೆ - ಪ್ರಜಾಪ್ರಭುತ್ವದ ಕಗ್ಗೊಲೆ" ಎಂಬ ಶೀರ್ಷಿಕೆಯಡಿ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.
ವಿಚಾರ ಸಂಕಿರಣದಲ್ಲಿ ಕತರ್ ಇಂಡಿಯನ್ ಸೋಶಿಯಲ್ ಫೋರಂನ ಕೇಂದ್ರ ವಲಯದ ಅಧ್ಯಕ್ಷ ಅಝೀಝ್ ಸುಭಾನ್, ಖ್ಯಾತ ಉದ್ಯಮಿಗಳಾದ ಮುಮ್ತಾಝ್ ಹುಸೈನ್, ಫಾರೂಕ್ ಇಂಜಿನಿಯರ್ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಂದೂಕಿನ ಮೂಲಕ ದಮನಿಸುವ ದುಷ್ಕೃತ್ಯಗಳು ಬಹಳ ಹಿಂದಿನಿಂದ ನಡೆದುಕೊಂಡು ಬರುತ್ತಿದೆ. ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವಿರುವ ಕರ್ನಾಟಕದಲ್ಲೂ ಸಹ ವಿಚಾರವಾದಿಗಳಾದ ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹತ್ಯೆ ನಡೆದಿದ್ದು, ಇಂದಿನವರೆಗೂ ಆರೋಪಿಗಳನ್ನು ಬಂಧಿಸದ ಪೊಲೀಸರ ನಿಷ್ಕ್ರಿಯತೆಯ ವಿರುದ್ಧ ಸಭೆ ಆತಂಕ ವ್ಯಕ್ತಪಡಿಸಿತು.
ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂದು ಭಯೋತ್ಪಾದನೆಗೆ ಮುನ್ನುಡಿ ಬರೆದ ದುಷ್ಟ ಶಕ್ತಿಗಳ ಮುಂದುವರಿದ ದಾಳಿಯಾಗಿದೆ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ. ಆದರೆ ಇದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಆಡಳಿತ ಪಕ್ಷವಾದ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೂಡ ಭಯಪಡುವಂತಹ ಪರಿಸ್ಥಿತಿಯನ್ನು ಗಮನಿಸಿದರೆ ಭಾರತದ ಭವಿಷ್ಯದ ಬಗ್ಗೆ ಆತಂಕವಾಗುತ್ತದೆ ಎಂದು ಗಣ್ಯರು ಅಭಿಪ್ರಾಯಿಸಿದರು.
ಜಗತ್ತಿನಲ್ಲೇ ಅತ್ಯಂತ ಸುಂದರ ಸಂವಿಧಾನ ಮತ್ತು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ, ಜನಸಾಮಾನ್ಯ ನಾಗರಿಕರಿಂದ ಮಾತನಾಡುವ, ಬರೆಯುವ, ಆಹಾರವನ್ನು ಸೇವಿಸುವ ಹಕ್ಕನ್ನು ಕಸಿದುಕೊಂಡು, ಮನುವಾದವನ್ನು ಹೇರಲು ಹೊರಟಿರುವ ಸವರ್ಣೀಯರ ಅಜೇಂಡಾವನ್ನು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಮತ್ತು ಜನಸಾಮಾನ್ಯರು ಒಂದಾಗಿ ಹೋರಾಟದ ಮೂಲಕ ತಡೆಗಟ್ಟಬೇಕೆಂದು ಸಭೆಯಲ್ಲಿ ಎಲ್ಲರೂ ಒಮ್ಮತದಿಂದ ಆಗ್ರಹಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕತರ್ ಇಂಡಿಯನ್ ಸೋಶಿಯಲ್ ಫೋರಂನ ಕರ್ನಾಟಕ ಘಟಕದ ಅಧ್ಯಕ್ಷ ನಝೀರ್ ಪಾಷ ವಹಿಸಿದ್ದರು.
ಚರ್ಚೆಯಲ್ಲಿ ಕತರ್ ಇಂಡಿಯನ್ ಫ್ರಟೆರ್ನಿಟಿ ಫೋರಂನ ಕರ್ನಾಟಕ ಘಟಕದ ಅಧ್ಯಕ್ಷ ಅಬ್ದುಲ್ ಲತೀಫ್ ಮಡಿಕೇರಿ, ಅನ್ವರ್ ಸಾದಾತ್ ಬಜತ್ತೂರ್, ಝಮೀರ್ ಹಳೆಯಂಗಡಿ, ಸಯ್ಯದ್ ಕಲೀಮ್ ಖಾದ್ರಿ, ಉಸ್ಮಾನ್ ಬಂಗಾಡಿ, ಝುಲ್ಫಿಕರ್ ಮುಂತಾದವರು ಉಪಸ್ಥಿತರಿದ್ದರು.