ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಸಿಪಿಎಂ ಪ್ರತಿಭಟನೆ
ಬೈಂದೂರು, ಅ.23: ರೈಲ್ವೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿ ಸುವಂತೆ ಆಗ್ರಹಿಸಿ ಸಿಪಿಐ(ಎಂ) ಬೈಂದೂರು ವಲಯ ಸಮಿತಿಯ ನೇತೃತ್ವದಲ್ಲಿ ಸೋಮವಾರ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಹಾಸನ -ಕುಣಿಗಲ್ ಮಾರ್ಗವಾಗಿ ಮತ್ತೊಂದು ರಾತ್ರಿ ರೈಲು ಬೆಂಗಳೂರಿಗೆ ಆರಂಭಿಸಬೇಕು. ಯಶವಂತಪುರ ಕಾರವಾರ ಹಗಲು ರೈಲನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು.
ಬೆಂಗಳೂರು- ಕಣ್ಣೂರು- ಕಾರಾವಾರ ನಡುವೆ ಸಂಚರಿಸುವ ಕಂಬೈನ್ಡ್ ಎಕ್ಸ್ಪ್ರೆಸ್ ರೈಲನ್ನು ಕಂಕನಾಡಿ ಜಂಕ್ಷನ್ನಲ್ಲಿ ಪ್ರತ್ಯೇಕಿಸಬೇಕೆಂದು ಆಗ್ರಹಿಸಿದರು. ನಿಗದಿತ ಸಮಯಕ್ಕೆ ರೈಲುಗಳು ತಲುಪುವಂತೆ ಕ್ರಮಕೈಗೊಳ್ಳಬೇಕು. ದಕ್ಷಿಣ ಹಾಗೂ ಕೇಂದ್ರ ರೈಲ್ವೆಗೆ ಹೋಗುವ ಆದಾಯವನ್ನು ತಡೆಗಟ್ಟಿ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪಿಸಬೇಕು. ಬೈಂದೂರು -ಗಂಗನಾಡು ರೈಲ್ವೆ ಗೇಟ್ ಬಳಿ ಅಂಡರ್ಪಾಸ್ ನಿರ್ಮಿಸಬೇಕು. ಸೇನಾಪುರದಲ್ಲಿ ಎಕ್ಸ್ಪ್ರೆಸ್ ರೈಲು ನಿಲು ಗಡೆಗೊಳಿಸಬೇಕು. ರೈಲ್ವೆ ನಿಲ್ದಾಣಗಳಲ್ಲಿ ಮೂಲಭೂತ ಸೌರ್ಕಯಗಳನ್ನು ಒದಗಿಸಬೇಕು. ಈಗಿರುವ ಕಾರವಾರ ಮೈಸೂರು ಬೆಂಗಳೂರು ರೈಲನ್ನು ವಾರ ದಲ್ಲಿ 4ದಿನ ಕುಣಿಗಲ್ ಮಾರ್ಗವಾಗಿ ಸಂಚರಿಸಿ ಉಳಿದ 3 ದಿನ ಮಾತ್ರ ಮೈಸೂರಿಗೆ ಸಂಚರಿಸುವ ನಿರ್ಧಾರ ಕೈಬಿಡಬೇಕು. ಬೆಂಗಳೂರಿಗೆ ಪ್ರತ್ಯೇಕ ರೈಲನ್ನು ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ಕರಾವಳಿ ಜನಪ್ರತಿನಿಧಿಗಳ ನಿರ್ಲಕ್ಷ್ಯತನದಿಂದಾಗಿ ಜಿಲ್ಲೆಯ ಜನರು ರೈಲು ಸೇವೆಯಿಂದ ವಂಚಿತರಾಗಿದ್ದಾರೆ. ಬಸ್ ಮಾಲೀಕರು ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡುತ್ತಿದ್ದರೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತ್ತಿದೆ. ಬಡ ಜನರು, ಕಾರ್ಮಿಕರು ಅನ್ಯಾಯಕ್ಕೊಳಗಾಗಿದ್ದಾರೆ. ಜನಪ್ರತಿನಿದಿಗಳು ಮಾಲಿಕರ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಬಳಿಕ ರೈಲ್ವೆ ಟ್ರಾಫಿಕ್ ಅಧಿಕಾರಿ ವಿನಯ್ ಕುಮಾರ್ಗೆ ಮನವಿಯನ್ನು ಸಲ್ಲಿಸ ಲಾಯಿತು. ಸ್ಥಳೀಯ ಮುಖಂಡ ವೆಂಕಟೇಶ್ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎಚ್.ನರಸಿಂಹ ಮಾತನಾಡಿದರು. ರಾಜೀವ ಪಡುಕೋಣೆ ವಂದಿಸಿದರು. ಸಂತೋಷ ಹೆಮ್ಮಾಡಿ, ಗಣೇಶ್ ಮೊಗವೀರ, ಪರಮೇಶ್ವರ ಗಾಣಿಗ, ಅರುಣ್ ಗಂಗೊಳ್ಳಿ, ಚಿಕ್ಕ ಮೊಗವೀರ ಉಪಸ್ಥತರಿದ್ದರು.