ರಸ್ತೆ ಅಪಘಾತ: ಯುವಕ ಸ್ಥಳದಲ್ಲೇ ಮೃತ್ಯು
ಪುತ್ತೂರು, ಅ. 23: ಸುಳ್ಯದ ಮೋಹನ್ ಜ್ಯುವೆಲ್ಲರಿ ಮಾರ್ಟ್ ಮಾಲಕ ಧೀರಜ್ರವರ ಕಾರು ಪುತ್ತೂರು ಅಮ್ಚಿನಡ್ಕದಲ್ಲಿ ಸೇತುವೆಗೆ ಗುದ್ದಿದ ಪರಿಣಾಮವಾಗಿ ಜ್ಯುವೆಲ್ಲರಿಯಲ್ಲಿ ಧೀರಜ್ರ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ಶಿರಸಿಯ ಯುವಕ ಸ್ಥಳದಲ್ಲೇ ಮೃತಪಟ್ಟ ಹಾಗೂ ಧೀರಜ್ ಗಂಭೀರವಾಗಿ ಗಾಯಗೊಂಡ ಘಟನೆ ಅ.22ರಂದು ರಾತ್ರಿ ನಡೆದಿದೆ.
ಸುಳ್ಯ ಖಾಸಗಿ ಬಸ್ ನಿಲ್ದಾಣ ದಲ್ಲಿರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ಸಂಸ್ಥೆಯ ಮಾಲಕ ದಿವಾಕರ ರಾವ್ ಇತ್ತೀಚೆಗೆ ಅಸೌಖ್ಯದಿಂದ ನಿಧನರಾಗಿದ್ದ ಬಳಿಕ ಅವರ ಏಕೈಕ ಪುತ್ರ ಧೀರಜ್ ಅಂಗಡಿ ವ್ಯವಹಾರ ನೋಡಿ ಕೊಳ್ಳುತ್ತಿದ್ದರು. ಅ.21ರಂದು ಧೀರಜ್ರವರು ತಮ್ಮ ಜ್ಯುವೆಲ್ಲರ್ಗೆ ಬೆಳ್ಳಿಯ ವಸ್ತುಗಳನ್ನು ಖರೀದಿ ಮಾಡಲೆಂದು ಉಡುಪಿಗೆ ತನ್ನ ಅಂಗಡಿಯ ಕೆಲಸದಾಳು ಶಿರಸಿಯ ಗಜರನ್ನು ಕರೆದುಕೊಂಡು ಹೋಗಿದ್ದರು. ಉಡುಪಿಯಲ್ಲಿ ಬೆಳ್ಳಿ ಖರೀದಿಸಿ, ಅದನ್ನು ತಮ್ಮ ಕಾರಿನಲ್ಲಿಟ್ಟು ರಾತ್ರಿ ಉಡುಪಿಯಿಂದ ಸುಳ್ಯಕ್ಕೆ ಹೊರಟಿದ್ದರು. ತಡರಾತ್ರಿ 1 ಗಂಟೆ ಸುಮಾರಿಗೆ ಕಾರು ಅಮ್ಚಿನಡ್ಕದ ಬಳಿ ಬರುತ್ತಿದ್ದಂತೆ ಮಂಜು ಮುಸುಕಿದ ವಾತಾವರಣ ಇದ್ದುದರಿಂದಾಗಿ ರಸ್ತೆಯ ಬದಿಯಲ್ಲಿದ್ದ ಕಾಂಕ್ರೀಟ್ ಮೋರಿಗೆ ಕಾರು ಗುದ್ದಿತು. ಕಾರು ಗುದ್ದಿದ ರಭಸಕ್ಕೆ ಕಾರಿನ ಎದುರು ಕುಳಿತಿದ್ದ ಗಜ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.
ಕಾರು ಚಲಾಯಿಸುತ್ತಿದ್ದ ಧೀರಜ್ರವರ ಕಾಲಿಗೆ ಮತ್ತು ಕೈಗೆ ಬಲವಾದ ಏಟಾಯಿತು. ಘಟನೆ ತಡರಾತ್ರಿ ನಡೆದುದರಿಂದ ಆ ಸಮಯದಲ್ಲಿ ಆ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಆ ರಸ್ತೆಯಲ್ಲಿ ಮಂಗಳೂರಿನಿಂದ ಮೈಸೂರಿಗೆ ಪ್ರವಾಸ ತೆರಳುತ್ತಿದ್ದ ಯುವಕರ ತಂಡವೊಂದು ಅಪಘಾತವಾಗಿರುವುದನ್ನು ಕಂಡು ನಿಲ್ಲಿಸಿ, ಗಾಯಗೊಂಡಿದ್ದ ಧೀರಜ್ರನ್ನು ಕಾಪಾಡಿದರಲ್ಲದೆ, ಅಕ್ಕಪಕ್ಕದ ಮನೆಯವರನ್ನು ಎಬ್ಬಿಸಿದರೆಂದೂ ಹೇಳಲಾಗಿದೆ.
ಗಾಯಾಳು ಧೀರಜ್ ತಾನು ಸುಳ್ಯದ ಜಟ್ಟಿಪಳ್ಳದವನೆಂದು ಹೇಳಿದ ಕಾರಣ, ಆ ಯುವಕರು ಜಟ್ಟಿಪಳ್ಳದಲ್ಲಿ ತಮ್ಮ
ಪರಿಚಯದ ತರಕಾರಿ ಅಬ್ದುಲ್ಲರಿಗೆ ಫೋನ್ ಮಾಡಿ ವಿಷಯ ತಿಳಿಸಿದರೆಂದೂ, ಅಬ್ದುಲ್ಲರು ನ.ಪಂ. ಸದಸ್ಯ ರಮಾನಂದ ರೈ ಮತ್ತು ಇತರ ಯುವಕರಿಗೆ ತಿಳಿಸಿದರೆಂದೂ ತಿಳಿದು ಬಂದಿದೆ. ರಮಾನಂದ ರೈಯವರು ಬಾತಿಶ, ಫವಾಝ್, ಸಿಯಾಜ್ ಸಿ.ಎ, ಬದ್ರುದ್ದೀನ್, ಫಯಾಝ್ ಜಟ್ಟಿಪಳ್ಳ, ಶಫೀಕ್
ಕೆರೆಮೂಲೆಯವರೊಡನೆ ಧೀರಜ್ರ ಮನೆಗೆ ಹೋಗಿ ವಿಷಯ ತಿಳಿಸಿ ಸುಳ್ಯ ಆಸ್ಪತ್ರೆಗೆ ಬಂದರು. ಅದೇ ವೇಳೆಗೆ ಮಂಗಳೂರಿನ ಯುವಕರು, 108ಕ್ಕೆ ಫೋನ್ ಮಾಡಿ, ಬಳಿಕ ತಮ್ಮ ವಾಹನ ದಲ್ಲೇ ಧೀರಜ್ರನ್ನು ಹಾಗೂ 108ನಲ್ಲಿ ಗಜರವರ ದೇಹವನ್ನು ಸುಳ್ಯ ಆಸ್ಪತ್ರೆಗೆ ತಂದರು. ಗಾಯಾಳು ಧೀರಜ್ರನ್ನು ತುರ್ತು ಚಿಕಿತ್ಸೆಗಾಗಿ ಸಂಬಂಧಿ ಗುರುದತ್ ಮತ್ತಿತರರೊಂದಿಗೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಯಿತು.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.