ನ.22: ಎಡೋರೇಶನ್ ಮೊನೆಸ್ಟ್ರಿಯ ಬೆಳ್ಳಿ ಹಬ್ಬ; ಬಲಿಪೂಜೆ
ಮಂಗಳೂರು, ನ.20: ನಗರದ ಫಳ್ನೀರ್ ರಸ್ತೆಯ ಬಳಿ ಇರುವ ಎಡೋರೇಶನ್ ಮೊನೆಸ್ಟ್ರಿಯ (ಕ್ರೈಸ್ತ ಆರಾನಾ ಮಠ) ಬೆಳ್ಳಿ ಹಬ್ಬದ ಸಮಾರಂಭದ ಅಂಗವಾಗಿ ನವೆಂಬರ್ 22ರಂದು ಮಂಗಳೂರು, ಉಡುಪಿ ಮತ್ತು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಿಂದ ಬಲಿಪೂಜೆ ನಡೆಯಲಿದೆ ಎಂದು ಕಪುಚಿನ ಚರ್ಚ್ನ ಧರ್ಮಗುರಗಳಾದ ವಂ.ಮೆಲ್ವಿನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನ. 22ರಂದು ಬುಧವಾರ ಬೆಳಿಗ್ಗೆ 9ರಿಂದ ಸಂಜೆ 5ರವೆಗೆ ಮಂಗಳೂರು, ಉಡುಪಿ.ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಮೂಲಕ ಬಲಿಪೂಜೆ ನಡೆಯಲಿದೆ ಎಂದು ಮೆಲ್ವಿನ್ ಡಿ ಸೋಜ ತಿಳಿಸಿದ್ದಾರೆ.
ಪರಮ ಪ್ರಸಾದದ ಆರಾಧನೆಯೂ ನಡೆಯಲಿದೆ ಎಂದು ಇಟೆಲಿಯ ಸಂತ ಕ್ಲೇರಾ ಮತ್ತು ತಂಗಿ ಆಗ್ನೆಸ್ ಮೂಲಕ ವಿಶ್ವದಾದ್ಯಂತ ವಿಸ್ತರಿಸಿರುವ ಬಡಾ ಕ್ಲೇರಾರ ಕ್ರೈಸ್ತ ಸಭೆಯಲ್ಲಿ 14 ಸಾವಿರ ಕ್ರೈಸ್ತ ಸಂನ್ಯಾಸಿನಿಯರು ಇದ್ದಾರೆ. ಭಾರತದಲ್ಲಿರುವ ಸಂತ ಕ್ಲಾರಾ ಸಹೊದರಿಯರ 14 ಮಠಗಳ ಪೈಕಿ ಒಂದಾದ ಮಂಗಳೂರಿನ ಎಡೋರೇಶನ್ ಮೊನೆಸ್ಟಿಯಲ್ಲಿ 1992 ಎಪ್ರಿಲ್ ತಿಂಗಳಲ್ಲಿ 8 ಮಂದಿ ಭಗಿನಿಯರು ಆಗಮಿಸಿದ್ದು ಈ ಪೈಕಿ ಮೂವರು ನಿಧರಾಗಿದ್ದು ಕಳೆದ ವರ್ಷ ಇಬ್ಬರು ಸೇರ್ಪಡೆಗೊಂಡಿದ್ದಾರೆ. ‘‘ಕಥೋಲಿಕ್ ಕ್ರೈಸ್ತ ಸಭೆಯಲ್ಲಿ ದೇವರ ಕರೆಗೆ ಓಗೊಟ್ಟು ದೇವರ ಸೇವೆ ಮಾಡುವ ಉದ್ದೇಶದಿಂದ ನಮ್ಮನ್ನು ದೇವರಿಗೆ ಅರ್ಪಿಸಿಕೊಂಡು ಕಳೆದ 25ವರ್ಷಗಳಿಂದ ಮಂಗಳೂರಿನಲ್ಲಿದ್ದೇನೆ.1954ರಲ್ಲಿ ನಾನು ಕೇರಳದಲ್ಲಿ ನನ್ನ ಅಕ್ಕನ ಜೊತೆ ಈ ಸಭೆಗೆ ಸೇರಿದೆ.4ವರ್ಷದ ತರಬೇತಿಯ ಬಳಿಕ 1958ರಿಂದ 1992ರವರೆಗೆ ತಮಿಳುನಾಡಿನ ನೀಲಗಿರಿ (ಊಟಿ)ಯಲ್ಲಿದ್ದೆ. ಬಳಿಕ ಮಂಗಳೂರಿಗೆ ಆಗಮಿಸಿದ್ದೇನೆ. ನಾನು ಈ ಸಭೆಗೆ ಸೇರಿದ ಬಳಿಕ ನನ್ನ ಕುಟುಂಬ ಬಂದು ಬಳಗದ ಜೊತೆ ಯಾರ ಸಂಪರ್ಕದಲ್ಲೂ ಇಲ್ಲ ಯಾವೂದೇ ಸಾರ್ವಜನಿಕರ ಕಾರ್ಯಕ್ರಮಗಳಲ್ಲೂ ಭಾಗವಹಿಸದೆ ನಾಲ್ಕು ಗೋಡೆಗಳ ನಡುವೆ ನಿರಂತರವಾಗಿ ದೇವರ ಧ್ಯಾನದಲ್ಲಿ ರಾತ್ರಿ ಹಗಲು ತೊಡಗಿರುತ್ತೇವೆ ಮತ್ತು ಆತ್ಮ ಸಂತೋಷದಿಂದ ಇದ್ದೇವೆ. ಕೆಲವರು ಆಧ್ಯಾತ್ಮಿಕ, ಮಾನಸಿಕ, ದೈಹಿಕ ಕಾಯಿಲೆಯಿಂದ ಹಾಗೂ ಇತರ ಸಮಸ್ಯೆಗಳೊಂದಿಗೆ ನಮ್ಮ ಬಳಿ ಬಂದು ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ ಅವರಿಗಾಗಿಯೂ ಪರಮ ಪ್ರಸಾದದ ಮುಂದೆ ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇವೆ. ಪ್ರಾರ್ಥನೆಯ ಬಲದಿಂದ ಅವರಲ್ಲಿ ಧೈರ್ಯ ತುಂಬುತ್ತೇವೆ ’’ಎಂದು ಆರಾಧನ ಮಠದ ಮಖ್ಯ ಭಗಿನಿ ಮದರ್ ಮೇರಿ ಸ್ಟೆಲ್ಲಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಿಸ್ಟರ್ ರೀಟಾ ವಾಸ್,ಪ್ರಚಾರ ವಿಭಾಗದ ಪ್ರತಿನಿಧಿ ಇ.ಫೆರ್ನಾಂಡೀಸ್ ಮೊದಲಾದವರು ಉಪಸ್ಥಿತರಿದ್ದರು.
ಆರಾಧನಾ ಮಠದ ಮೇಲಿನ ದಾಳಿಯ ನೆನಪು
ಮಂಗಳೂರಿನಲ್ಲಿ ಸೆ.14, 2008ರಂದು ಬೆಳಗ್ಗೆ 10.20 ಈ ಕ್ರೈಸ್ತ ಸನ್ಯಾಸಿಗಳಿರುವ ಆರಾಧನಾ ಮಠದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಪರಮ ಪ್ರಸಾದ ಕ್ಕೆ ಹಾನಿ ಮಾಡಿ ಏಸು ಕ್ರಿಸ್ತರ ಪ್ರತಿಮೆಗೆ ಹಾನಿ ಮಾಡಿರುವ ಕರಾಳ ನೆನಪನ್ನು ಇಲ್ಲಿನ ಸನ್ಯಾಸಿನಿಯರು ನೆನಪಿಸಿಕೊಳ್ಳುತ್ತಾರೆ.
ಈ ಸಂದರ್ಭ ಹಾನಿ ಮಾಡಲಾದ ಕುರುಹನ್ನು ಮಠದಲ್ಲಿ ಸಂರಕ್ಷಿಸಿ ಇಡಲಾಗಿದೆ. ಯಾವ ಸಂದರ್ಭದಲ್ಲೂ ಮಠವನ್ನು ಬಿಟ್ಟು ಹೊರ ಹೋಗದೆ ಇರುವ ಈ ಸಂನ್ಯಾಸಿನಿಯರು ದಾಳಿಯ ಸಾಕ್ಷಿಯಾಗಿದ್ದರು. ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಇವರ ಬಳಿಗೆ ದಾಖಲೆ ಪತ್ರಗಳನ್ನು ತಂದು ವಿಚಾರಣೆ ನಡೆಸಲಾಗಿದೆ ಎನ್ನುವ ನೆನಪುಗಳನ್ನು ಹಿರಿಯರಾದ ಮದರ್ ಮೇರಿ ಸ್ಟೆಲ್ಲಾ ತಮ್ಮ ಆರಾಧನಾ ಮಠದ ಕೋಣೆಯೊಳಗಿನ ಕಿಟಕಿಯ ಮೂಲಕ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು.