ಉಡುಪಿ: ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ
ಉಡುಪಿ, ನ.23: ಮನೆಯಲ್ಲಿ ಒಂಟಿಯಾಗಿದ್ದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ಉಡುಪಿ 76 ಬಡಗುಬೆಟ್ಟುವಿನ ಬೈಲೂರು ಸಮೀಪದ ವಾಸುಕಿನಗರ ಎಂಬಲ್ಲಿ ನಡೆದಿದೆ.
ಕೊಲೆಗೀಡಾದವರನ್ನು ವಸಂತ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ತನ್ನ ಅಕ್ಕ ಉಮಾ ಎಂಬವರೊಂದಿಗೆ ವಾಸವಾಗಿದ್ದು, ಬೆಳಗ್ಗೆ ಮನೆಯಲ್ಲಿ ಒಂಟಿಯಾಗಿದ್ದರು. ಈ ಸಂದರ್ಭ ವಸಂತ್ ಕುಮಾರ್ ಗೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದರೆನ್ನಲಾಗಿದೆ.
ಬೆಳಗ್ಗೆ 10:45ರ ಸುಮಾರಿಗೆ ವಸಂತ್ ಕುಮಾರ್ ಮನೆಯಿಂದ ಬೊಬ್ಬೆ ಕೇಳಿ ಸಮೀಪದ ಚರ್ಚ್ನಲ್ಲಿದ್ದವರು ಹಾಗೂ ಸ್ಥಳೀಯರು ಅಲ್ಲಿಗೆ ಹೋಗಿ ನೋಡಿದಾಗ ವಸಂತ್ ಕುಮಾರ್ ಮನೆಯ ಹಿಂಬಾಗಿಲಿನಲ್ಲಿ ಇರುವ ಕಸದ ಗುಂಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಅಲ್ಲೇ ಸಮೀಪ ಒಂದು ಚೂರಿ ಬಿದ್ದಿರುವುದು ಮತ್ತು ಒಂದು ಕಲ್ಲು ಇರುವುದು ಪತ್ತೆಯಾಗಿತ್ತು.
ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ವಸಂತ್ ಕುಮಾರ್ ನನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಗಂಭೀರ ಸ್ಥಿತಿಯಲ್ಲಿದ್ದ ಅವರು ಅಪರಾಹ್ನ 3ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.