ಡಿ.4ರಂದು ಕಡಬ ತಾಲೂಕು ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ
ಕಡಬ, ನ.30. ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ಕಸ್ತೂರಿ ರಂಗನ್, ಗಾಡ್ಗಿಲ್ ವರದಿ, ವೈಲ್ಡ್ ಲೈಫ್, ಪುಷ್ಪಗಿರಿ ವನ್ಯಧಾಮ ಮತ್ತು ಆನೆ ಕಾರಿಡಾರ್ ಯೋಜನೆಗಳ ವಿರುದ್ಧ ಡಿಸೆಂಬರ್ 4ರಂದು ಪೂರ್ವಾಹ್ನ 11 ಗಂಟೆಗೆ ಕಡಬ ತಾಲೂಕು ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಾಗೂ ರಾಷ್ಟ್ರಪತಿಗೆ ಮನವಿ ಸಮರ್ಪಣೆ ನಡೆಯಲಿದೆ ಎಂದು ಕಡಬ ತಾಲೂಕು ಜಾತ್ಯಾತೀತ ಜನತಾದಳ ಅಧ್ಯಕ್ಷ ಸೈಯದ್ ಮೀರಾ ಸಾಹೇಬ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಡಬ ತಾಲೂಕು ವ್ಯಾಪ್ತಿಯ ಬಲ್ಯ, ಕೌಕ್ರಾಡಿ, ಶಿರಾಡಿ, ಶಿಬಾಜೆ, ಕೊಂಬಾರು, ಬಿಳಿನೆಲೆ, ಸುಬ್ರಹ್ಮಣ್ಯ, ಐನೆಕಿದು, ಹರಿಹರ, ಕೊಲ್ಲಮೊಗ್ರು, ಏನೆಕಲ್, ಬಳ್ಪ, ಕೂತ್ಕುಂಜ ಸೇರಿದಂತೆ ಹಲವು ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ ಮತ್ತು ಗಾಡ್ಗಿಲ್ ವರದಿಯಲ್ಲಿ ನೋಟಿಫಿಕೇಶನ್ ಮಾಡಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ವಾಸಿಸುವಂತಹ ಸಾವಿರಾರು ಕುಟುಂಬಗಳು ಬೀದಿಪಾಲಾಗುವ ಪರಿಸ್ಥಿತಿ ತಲೆದೋರಿದೆ. ಇದೀಗ ಅಂತಿಮ ಗಜೆಟ್ ನೋಟಿಫಿಕೇಶನ್ ಮಾಡಲಾಗಿದ್ದು, ಅದನ್ನು ತಡೆಹಿಡಿಯಬೇಕೆಂದು ಆಗ್ರಹಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತ ಎಚ್.ಎಲ್.ವೆಂಕಟೇಶ್, ಯುವ ಜನತಾದಳ ಸುಳ್ಯ ತಾಲೂಕು ಅಧ್ಯಕ್ಷ ಜೀವನ್ ನಾರ್ಕೋಡು, ಕಡಬ ತಾಲೂಕು ರೈತ ಸಂಘದ ಅಧ್ಯಕ್ಷ ವಿಕ್ಟರ್ ಮಾರ್ಟಿಸ್, ಚಂದ್ರಶೇಖರ ಗೌಡ ಕೋಡಿಬೈಲು, ಗುರಿವಪ್ಪ ಕಲ್ಲುಗುಡ್ಡೆ, ಯುವ ಜನತಾದಳ ಕಡಬ ತಾಲೂಕು ಅಧ್ಯಕ್ಷ ಹರೀಶ್ ಎನ್ಕಾಜೆ, ಮಹಿಳಾ ಜನತಾದಳ ಕಡಬ ತಾಲೂಕು ಲೂಸಿ ಮೊದಲಾದವರು ಉಪಸ್ಥಿತರಿದ್ದರು.