'ಸಾಮರಸ್ಯ ನಡಿಗೆ ಸೌಹಾರ್ದತೆಯೆಡೆಗೆ' ಮಾಣಿಯಲ್ಲಿ ಸಿದ್ಧತಾ ಸಭೆ
ವಿಟ್ಲ, ಡಿ.8: ದ.ಕ.ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಹಾಗು ಸಹಬಾಳ್ವೆಯ ಜೀವನವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಡಿ.12ರಂದು ಹಮ್ಮಿಕೊಂಡ ಫರಂಗಿಪೇಟೆಯಿಂದ ಮಾಣಿ ವರೆಗಿನ 'ಸಾಮರಸ್ಯ ನಡಿಗೆ ಸೌಹಾರ್ದತೆಯೆಡೆಗೆ' ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರಾಜ್ಯ ಅರಣ್ಯ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕರೆ ನೀಡಿದರು.
ಮಾಣಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುವಾರ ರಾತ್ರಿ ನಡೆದ 'ನಡಿಗೆ' ಕಾರ್ಯಕ್ರಮದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆವರು ದ.ಕ. ಜಿಲ್ಲೆಯ ಜನತೆ ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಪರಸ್ಪರ ದ್ವೇಷಿಸುವಂತೆ ಮಾಡಲು ಸಹಕಾರ ನೀಡುವುದಿಲ್ಲ ಎಂಬ ಸಂದೇಶವನ್ನು ನೀಡಬೇಕಾಗಿದೆ ಎಂದರು.
ಡಿವೈಎಫ್ಐ ಜಿಲ್ಲಾದ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಸಾಮರಸ್ಯ ಬದುಕಿಗೆ ಯಾವುದೇ ರೀತಿಯ ಚ್ಯುತಿಯಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕರೆಲ್ಲರೂ ಪಕ್ಷ ಮರೆತು ಒಂದಾದ್ದೇವೆ ಹೊರತು ಯಾವುದೇ ರೀತಿಯ ರಾಜಕೀಯ ಉದ್ದೇಶ ಇಲ್ಲ ಎಂದರು.
ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮುಹಮ್ಮದ್, ಮಂಜುಳ ಮಾವೆ, ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಬೂಡ ಅಧ್ಯಕ್ಷ ಸದಾಶಿವ ಬಂಗೇರ, ಪ್ರಮುಖರಾದ ಮೋಹನಚಂದ್ರ ನಂಬಿಯಾರ್, ಪ್ರಶಾಂತ ಕುಲಾಲ್, ಮಾದವ ಮಾವೆ, ಕುಶಲ ಎಂ ಪೆರಾಜೆ, ಶ್ರೀದರ ರೈ ಕುರ್ಲೆತ್ತಿಮಾರ್, ಜಯಂತಿ ಪೂಜಾರಿ, ಚಂದ್ರಶೇಖರ ರೈ, ಮಲ್ಲಿಕಾ ಪಕ್ಕಳ, ಮಹೇಶ್ ನಾಯಕ್, ವಿಜಯ ಏಮಾಜೆ, ಸುದೀಪ್ ಕುಮಾರ್, ಕೊರಗಪ್ಪ ಪೂಜಾರಿ ಮಾಣಿ ಮೊದಲಾದವರು ಉಪಸ್ತಿತರಿದ್ದರು. ಬಾಲಕೃಷ್ಣ ಆಳ್ವ ಕೊಡಾಜೆ ಸ್ವಾಗತಿಸಿ, ವಂದಿಸಿದರು.