ಫಲಾನುಭವಿಗಳಿಗೆ ನೇರವಾಗಿ ಸವಲತ್ತು: ಸೊರಕೆ
ಉಡುಪಿ, ಡಿ.13: ಸಾಮಾನ್ಯ ಜನರಿಗೆ ಸರಕಾರದಿಂದ ಸಿಗುವ ಸವಲತ್ತು ಗಳನ್ನು ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಬಾರದು. ಫಲಾನುಭವಿಗಳಿಗೆ ಅದು ನೇರವಾಗಿ ಲಭಿಸಬೇಕು ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಬುಧವಾರ ಹಿರಿಯಡಕ ಸಾಂಸ್ಕೃತಿಕ ಕಲಾಮಂದಿರದಲ್ಲಿ ನಡೆದ ಬೊಮ್ಮರಬೆಟ್ಟು, ಕೊಡಿಬೆಟ್ಟು, ಬೈರಂಪಳ್ಳಿ, ಆತ್ರಾಡಿ, ಪೆರ್ಡೂರು, 80 ಬಡಗುಬೆಟ್ಟು, ಅಲೆವೂರು, ಉದ್ಯಾವರ, ಮಣಿಪುರ, ಕುಕ್ಕೆಹಳ್ಳಿ ಗ್ರಾಪಂಗಳ ವ್ಯಾಪ್ತಿಯ ಜನಸ್ಪಂದನ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಸರಕಾರದಿಂದ ಅರ್ಹ ಫಲಾನುಭವಿಗಳಿಗೆ ಹಲವಾರು ಸವಲತ್ತುಗಳು ಲಭಿಸುತ್ತಿದ್ದು, ಇದನ್ನು ಪಡೆಯಲು ಫಲಾನುಭವಿಗಳು ಕಚೇರಿ ಕಚೇರಿಗೆ ಅಲೆದಾಡುವುದರಿಂದ ಅವರಲ್ಲಿ ನಿರಾಸೆ ಉಂಟಾಗುತ್ತದೆ. ಸರಕಾರದ ಸೌಲ್ಯ ಗಳನ್ನು ನೇರವಾಗಿ ಪಡೆಯಲು ಹಾಗೂ ಇಲಾಖೆಗಳ ನಡುವಿನ ಅಲೆದಾಟ ವನ್ನು ಜನಸ್ಪಂದನ ಕಾರ್ಯಕ್ರಮ ತಪ್ಪಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ವತಿಯಿಂದ 92 ಮಂದಿಗೆ ಮನೆ ಮಂಜೂರಾತಿ ಪತ್ರ, 36 ಜನರಿಗೆ ಶೇ.25 ಅನುದಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 35 ಸ್ತ್ರೀಶಕ್ತಿ ಗುಂಪುಗಳಿಗೆ ಸುತ್ತು ನಿಧಿ, 105 ಜನರಿಗೆ ಅರಣ್ಯ ಇಲಾಖೆ ವತಿಯಿಂದ ಹೆಬ್ರಿ ವಲಯದವರಿಗೆ ಗ್ಯಾಸ್ ವಿತರಣೆ, ಪಶು ಸಂಗೋಪನಾ ಇಲಾಖೆಯಿಂದ 13 ಮಂದಿಗೆ ಅನುದಾನ, ಕೃಷಿ ಇಲಾಖೆ ಯಿಂದ 8 ಜನರಿಗೆ ಹುಲ್ಲು ಕತ್ತರಿಸುವ ಯಂತ್ರ ಹಾಗೂ ಅನುದಾನ, ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದಿಂದ 7ಮಂದಿಗೆ ಅನುದಾನ, ಮೀನುಗಾರಿಕೆ ಇಲಾಖೆಯಿಂದ ಮೂವರು ಫಲಾನುವಿಗಳಿಗೆ ಅನುದಾನ ಹಾಗೂ ಕಂದಾಯ ಇಲಾಖೆಯಿಂದ 143 ಜನರಿಗೆ 94ಸಿಸಿ ಮತ್ತು 94ಸಿ ಅನ್ವಯ ಹಕ್ಕುಪತ್ರ, 96 ಜನರಿಗೆ ವಿವಿಧ ವೇತನ, 3 ಜನರಿಗೆ ಪ್ರಾಕೃತಿಕ ವಿಕೋಪ ಅನುದಾನ, ಇಬ್ಬರಿಗೆ ರಾಷ್ಟ್ರೀಯ ಕುಟುಂಬ ವೇತನ ಹಾಗೂ ಇಬ್ಬರಿಗೆ ಇತರ ಅನುದಾನ ಸೇರಿ ಒಟ್ಟು 555ಫಲಾನುವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ತಹಶೀಲ್ದಾರ್ ಪ್ರದೀಪ್ ಕೆ, ಅಲ್ಪಸಂಖ್ಯಾತ ನಿಗಮದ ಮುಖ್ಯಸ್ಥ ಇಸ್ಮಾಯಿಲ್, ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ್ ಶೆಟ್ಟಿ, ತಾಪಂ ಸದಸ್ಯರಾದ ಸಂಧ್ಯಾಶೆಟ್ಟಿ, ಲಕ್ಷ್ಮೀನಾರಾಯಣ, ಬೊಮ್ಮರಬೆಟ್ಟು, ಕೊಡಿಬೆಟ್ಟು,ಬೈರಂಪಳ್ಳಿ, ಆತ್ರಾಡಿ, ಪೆರ್ಡೂರು, 80 ಬಡಗುಬೆಟ್ಟು, ಅಲೆವೂರು, ಉದ್ಯಾವರ, ಮಣಿಪುರ, ಕುಕ್ಕೆಹಳ್ಳಿಗಳ ಗ್ರಾಪಂ ಅಧ್ಯಕ್ಷರು ಉಪಸ್ಥಿತರಿದ್ದರು.
ಬೈರಂಪಳ್ಳಿ ಗ್ರಾಪಂ ಪಿಡಿಒ ಪ್ರವೀಣ್ ಸ್ವಾಗತಿಸಿ, ಉಡುಪಿ ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಮೋಹನ್ರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.