ಉಡುಪಿಯಲ್ಲಿ ಹೆಲಿ ಟೂರಿಸಂಗೆ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ
ಉಡುಪಿ, ಡಿ.22: ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿ ನಲ್ಲಿ ಆರಂಭಿಸಲಾಗಿರುವ ಹೆಲಿ ಟೂರಿಸಂಗೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಆದಿಉಡುಪಿ ಹೆಲಿಪ್ಯಾಡ್ನಲ್ಲಿ ಇಂದು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿರುವ ವಿವಿಧ ಪ್ರಕೃತಿದತ್ತ ಸ್ಥಳ ಗಳನ್ನು ಪ್ರವಾಸಿ ತಾಣಗಳಾಗಿ ಪರಿವರ್ತಿಸಿಕೊಳ್ಳಲು ವಿಫುಲ ಅವಕಾಶಗಳಿವೆ. ಉಡುಪಿ ಜಿಲ್ಲೆಯನ್ನು ಪ್ರವಾಸೋದ್ಯಮ ಜಿಲ್ಲೆಯನ್ನಾಗಿ ಅಭಿವೃದ್ಧಿ ಪಡಿಸಲು ಪ್ರವಾಸೋದ್ಯಮ, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಉಡುಪಿಯ ಆದಿಉಡುಪಿಯಲ್ಲಿ ಡಿ.22ರಿಂದ 27ರವರೆಗೆ ಮತ್ತು ಕುಂದಾ ಪುರದ ಕೋಟೇಶ್ವರ ಯುವ ಮೆರಿಡಿಯನ್ ರೆಸಾರ್ಟ್ನಲ್ಲಿ ಡಿ.28ರಿಂದ 31ರ ವರೆಗೆ ಹೆಲಿ ಟೂರಿಸಂ ಹಮ್ಮಿಕೊಳ್ಳಲಾಗಿದೆ. ಎಂಟು ನಿಮಿಷಗಳ ಜಾಲಿ ರೈಡ್ಗೆ ಒಬ್ಬರಿಗೆ 2500ರೂ. ಮತ್ತು 13ನಿಮಿಷಗಳ ಅಡ್ವೆಂಚರ್ ರೈಡ್ಗೆ ಒಬ್ಬರಿಗೆ 3500ರೂ. ಶುಲ್ಕ ವಿಧಿಸಲಾಗಿದೆ.
ಹೆಲಿಕಾಫ್ಟರ್ನಲ್ಲಿ ಒಂದು ಬಾರಿಗೆ ಪೈಲಟ್ ಹೊರತು ಪಡಿಸಿ ಆರು ಮಂದಿ ರೈಡ್ ಮಾಡಬಹುದು ಎಂದು ಉಡುಪಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ತಿಳಿಸಿದ್ದಾರೆ.
ಉಡುಪಿಯ ರೈಡ್ನಲ್ಲಿ ಮಲ್ಪೆ ಬೀಚ್, ಬಂದರು, ಮಣಿಪಾಲ, ಉಡುಪಿ ನಗರ ಹಾಗೂ ಕುಂದಾಪುರ ರೈಡ್ನಲ್ಲಿ ಬ್ಯಾಕ್ವಾಟರ್, ಗಂಗೊಳ್ಳಿ ಬಂದರು ಮತ್ತು ಕೋಡಿ ಬೀಚ್ ನೋಡಬಹುದಾಗಿದೆ.
ಅಡ್ವೆಂಚರ್ ರೈಡ್ನಲ್ಲಿ ಕೆಲವೊಂದು ಸ್ಟಂಟ್ ಪ್ರದರ್ಶನಗಳನ್ನು ಮಾಡಲಾಗುತ್ತದೆ. ಕಳೆದ ಬಾರಿ ಪ್ರತಿ ದಿನ 33 ರೈಡ್ ಮಾಡಲಾಗುತ್ತಿತ್ತು. ಈ ಬಾರಿ ಈಗಾಗಲೇ 15 ಮಂದಿ ರೈಡ್ಗೆ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ದೆಹಲಿಯ ಚಿಪ್ಸನ್ ಅವಿಯೇಶನ್ ಕಂಪೆನಿಯ ಹೆಲಿಕಾಫ್ಟರ್ನ್ನು ಹೆಲಿಟೂರಿಸಂಗೆ ಬಳಸಿಕೊಂಡಿದ್ದು, ಕ್ಯಾ.ರಮೇಶ್ ನುರಿತ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಈ ಮೊದಲು ಆದಿಉಡುಪಿಯ ಹೆಲಿಪ್ಯಾಡ್ ಸರಕಾರಿ ಭೂಮಿಯಾಗಿತ್ತು. ಇದರಿಂದ ಇಲ್ಲಿ ಹೆಲಿಟೂರಿಸಂಗೆ ಅವಕಾಶ ನೀಡದೆ ತುಂಬಾ ತೊಂದರೆ ಯಾಗಿತ್ತು. ಇದೀಗ ಇಲ್ಲಿನ 6.38 ಎಕರೆ ಭೂಮಿಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು.