ಯುನಿವೆಫ್: ದೇರಳಕಟ್ಟೆಯಲ್ಲಿ ಪ್ರವಾದಿ ಸಂದೇಶ ಕಾರ್ಯಕ್ರಮ
ದೇರಳಕಟ್ಟೆ, ಡಿ. 31: ರಾಷ್ಟ್ರೀಯತೆ, ಜಾತ್ಯಾತೀತತೆ ಹಾಗೂ ಸ್ವಚ್ಛತೆ ಮತ್ತು ಪ್ರವಾದಿ ಮುಹಮ್ಮದ್(ಸ) ಎಂಬ ಕೇಂದ್ರೀಯ ವಿಷಯದಲ್ಲಿ ಯುನಿವೆಫ್ ಕರ್ನಾಟಕ ಆಯೋಜಿಸಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು'ಎಂಬ ಅಭಿಯಾನದ ಸಾರ್ವಜನಿಕ ಕಾರ್ಯಕ್ರಮವು ದೇರಳಕಟ್ಟೆಯ ಸಿಟಿ ಗ್ರೌಂಡ್ ನಲ್ಲಿ ಜರಗಿತು.
ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರು ಸಾಮಾಜಿಕ ಬದಲಾವಣೆ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಿ, ಸಾಮಾಜಿಕ ಕೆಡುಕುಗಳು ಮತ್ತು ಮೂಢನಂಬಿಕೆಗಳು ವ್ಯಾಪಕವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಪ್ರವಾದಿ(ಸ)ರು ಕೇವಲ 23 ವರ್ಷಗಳ ಅವಧಿಯಲ್ಲಿ ಮಾಡಿದ ಸಾಮಾಜಿಕ ಕ್ರಾಂತಿ ನಮಗೆ ಮಾದರಿಯಾಗಿದೆ. ತನ್ನ ಬದುಕಿನ ಅವಧಿಯಲ್ಲೇ ಮದ್ಯಮುಕ್ತ, ವ್ಯಭಿಚಾರ ಮುಕ್ತ, ಬಡ್ಡಿ ಮುಕ್ತ, ಶೋಷಣೆ ಮುಕ್ತ ಸಮಾಜವೊಂದನ್ನು ನಿರ್ಮಿಸಿ ಸಜ್ಜನ ಸಮಾಜವೊಂದನ್ನು ನಿರ್ಮಾಣ ಮಾಡಿದರು. ಅತ್ಯುತ್ತಮ ಸಮುದಾಯವೆಂದು ಕುರ್ಆನ್ನಲ್ಲಿ ಅಭಿಸಂಬೋಧಿತರಾದ ಮುಸ್ಲಿಮ್ ಸಮುದಾಯವು ಇಂಥ ಕೆಡುಕುಗಳಿಗೆ ಒಗ್ಗಿಕೊಂಡಿರುವುದು ಕಾಲದ ದುರಂತ. ಯುನಿವೆಫ್ ಕರ್ನಾಟಕ ಇಂಥ ಕೆಡುಕುಗಳ ವಿರುದ್ಧ ಸಮರ ಸಾರಿದ ಸಂಘಟನೆಯಾಗಿದೆ. ಯುವಕರು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಸೈಫುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಲಹಾ ಸಮಿತಿ ಸದಸ್ಯ ಅಬ್ದುಲ್ಲಾ ಪಾರೆ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು. ರಾಹಿಲ್ ರಝಾಕ್ ಸಯೀದ್ ಕಿರ್ಅತ್ ಪಠಿಸಿದರು. ಅಹ್ಮದ್ ಶಹಿಯಾ ವಂದಿಸಿದರು.