'ಆಳ್ವಾಸ್ ವರ್ಣ ವಿರಾಸತ್ 2018' ರಾಷ್ಟ್ರೀಯ ಚಿತ್ರಕಲಾ ಶಿಬಿರಕ್ಕೆ ಚಾಲನೆ
ಮೂಡುಬಿದಿರೆ, ಜ. 10: ಆಳ್ವಾಸ್ ವಿರಾಸತ್ 2018ರ ಅಂಗವಾಗಿ 'ಆಳ್ವಾಸ್ ವರ್ಣವಿರಾಸತ್ 2018' ಆರು ದಿನಗಳು ನಡೆಯುವ ರಾಷ್ಟ್ರಮಟ್ಟದ ಸಮಕಾಲೀನ ಚಿತ್ರಕಲಾ ಶಿಬಿರಕ್ಕೆ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ವರ್ಣ ವಿರಾಸತ್ಗೆ ಚಾಲನೆ ನೀಡಿ, ಶುಷ್ಕ ಮನಸ್ಸು ಮರಣ ವಿದ್ದಂತೆ. ಮನಸ್ಸನ್ನು ಜೀವಂತವಿರಿಸುವ ಕೆಲಸ ಕಲೆ, ಸಂಸ್ಕೃತಿ, ಸಾಹಿತ್ಯದಿಂದ ಸಾಧ್ಯ. ನಮ್ಮ ಉದ್ದೇಶ ಮರಣವಾಗಬಾರದು. ಸಕಲ ಜೀವಿಗಳ ಪ್ರೀತಿಸಿ ಬದುಕುವಂತಹ ಜಾಯಮಾನ ನಮ್ಮದಾಗಬೇಕು. ಕಲಾವಿದರು ಜೀವಂತಿಕೆಯನ್ನು, ಪ್ರತಿ ಕಲಾವಿದರು ಅಸೀಮ ಭಾವನೆಯಿಂದ ಪ್ರಕೃತಿಯಲ್ಲಿರುವ ನೈಜ್ಯ ಸಂಸ್ಕೃತಿ ಕಲೆಯ ರೂಪದಲ್ಲಿ ಅನಾವರಣವಾಗಲಿ ಎಂದರು.
ಕರ್ನಾಟಕ ಲಲಿತ ಅಕಾಡಮಿಯ ಸದಸ್ಯ ರಾಜೇಂದ್ರ ಕೇದಿಗೆ, ಮಂಗಳೂರು ಕೆಎಂಸಿಯ ಪ್ರಾಧ್ಯಾಪಕ ಡಾ.ಸಿ.ಕೆ ಬಲ್ಲಾಳ್ ಮುಖ್ಯ ಅತಿಥಿಯಾಗಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆವಹಿಸಿದರು. ಶಿಬಿರ ಸಲಹಾ ಸಮಿತಿಯ ಸದಸ್ಯರಾದ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.
ದೇಶದ ವಿವಿಧ ರಾಜ್ಯಗಳ ಸುಮಾರು 20 ಮಂದಿ ಹಿರಿಯ ಹಾಗೂ ಯುವ ಕಲಾವಿದರಿಗೆ ಕುಂಚ ಪರಿಕರಗಳನ್ನು ನೀಡುವ ಮೂಲಕ ಶಿಬಿರಕ್ಕೆ ಸ್ವಾಗತಿಸಲಾಯಿತು. ಲಿಖಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.