ಮನಪಾ ಆಡಳಿತದ ವಿರುದ್ಧ ತುಂಬೆ ಡ್ಯಾಂ ಸಂತ್ರಸ್ತ ರೈತರ ಆಕ್ರೋಶ
ಬಂಟ್ವಾಳ, ಜ.11: ತುಂಬೆ ನೂತನ ವೆಂಟೆಡ್ ಡ್ಯಾಂನಲ್ಲಿ ಗುರುವಾರದಿಂದಲೇ 6 ಮೀ. ನೀರು ಸಂಗ್ರಹಕ್ಕೆ ಮುಂದಾಗಿರುವ ಮಂಗಳೂರು ಮಹಾನಗರ ಪಾಲಿಕೆಯ ಕ್ರಮಕ್ಕೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕಳೆದ ಮಾಚ್೯ನಲ್ಲಿ 5 ಮೀ. ನೀರು ಸಂಗ್ರಹ ಆರಂಭಿಸಿದ ವೇಳೆ ಸಂತ್ರಸ್ತ ರೈತರಿಗೆ ಶಾಶ್ವತ ಪರಿಹಾರ ವಿತರಿಸಲಾಗುವುದೆಂದು ಹೇಳಿಕೆ ನೀಡಿ ಈವರೆಗೂ ಪರಿಹಾರವನ್ನು ವಿತರಿಸಿಲ್ಲ. ಇದೀಗ 6 ಮೀ.ನೀರು ಸಂಗ್ರಹಕ್ಕೆ ಮುಂದಾಗಿರುವುದು ಮಂಗಳೂರು ಮಹಾನಗರ ಪಾಲಿಕೆ ಆಡಳಿತದ ರೈತ ವಿರೋಧಿ ನೀತಿಯಾಗಿದೆ ಎಂದು ಹೋರಾಟ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಕೇಂದ್ರ ಜಲಾಯೋಗದ ಸ್ಪಷ್ಟ ನಿರ್ದೇಶನದಂತೆ ವರತೆ ಪ್ರದೇಶದ ಒಂದು ಮೀ. ಎತ್ತರವನ್ನು ಸೇರಿಸಿ ಸರ್ವೇ ಮಾಡಿ ಪರಿಹಾರ ನೀಡಬೇಕೆಂಬ ನಿಯಮವನ್ನು ಕೂಡ ಇಲ್ಲಿ ಉಲ್ಲಂಘಿಸಲಾಗಿದೆ. ಗ್ರಾಮಕ್ಕೊಂದರಂತೆ ವ್ಯತ್ಯಾಸ ದರದ ನೆಲಬಾಡಿಗೆಯಲ್ಲೂ ತಾರತಮ್ಯ ಮಾಡಲಾಗಿರುವುದು.
ಇದು ರೈತರಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಹೋರಾಟ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
2016 ರ ಮಾರ್ಚ್ 23ರಂದು ಮುಳುಗಡೆ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಸಭೆ ನಡೆಸಿ ಮಾಡಿರುವ ನಿರ್ಣಯದಂತೆ ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಹೋರಾಟ ಸಮಿತಿಯ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಇದಿನಬ್ಬ ಎಸ್.ಕೆ., ಜಿಲ್ಲಾ ರೈತ ಸಂಘ ಹಸಿರು ಸೇನೆ ಕಾರ್ಯದರ್ಶಿ ಮನೋಹರ ಶೆಟ್ಟಿ, ತಾಲೂಕು ಕಾರ್ಯದರ್ಶಿ ಸುದೇಶ್ ಮಯ್ಯ ಅವರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.