ಪಾನಮತ್ತರಾಗಿದ್ದ ಲೇಡಿ ಪೈಲಟ್: 5 ತಾಸು ತಡವಾಗಿ ಹೊರಟ ಸ್ಪೈಸ್ ಜೆಟ್
ಪೈಲಟ್ ಅಮಾನತು
ಮಂಗಳೂರು, ಜ. 16: ಪೈಲಟ್ ಅವಾಂತರದಿಂದಾಗಿ ಮಂಗಳೂರಿನಿಂದ ದುಬೈಗೆ ತೆರಳಬೇಕಾದ ವಿಮಾನವೊಂದು ಮಂಗಳೂರು ವಿಮಾನ ನಿಲ್ದಾಣದಲ್ಲೇ ಬಾಕಿಯಾದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
180 ಪ್ರಯಾಣಿಕರನ್ನು ಹೊತ್ತಿದ್ದ ಸ್ಪೈಸ್ ಜೆಟ್ ವಿಮಾನ ರಾತ್ರಿ 12:40ರ ಸುಮಾರಿಗೆ ಹೊರಡಬೇಕಿತ್ತು. ಹೊರಡುವ ಮುನ್ನ ಎಂದಿನಂತೆ ಪೈಲೆಟ್ ರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿತ್ತು. ವಿಮಾನ ಚಲಾಯಿಸಬೇಕಾದ ಲೇಡಿ ಪೈಲಟ್ ಪಾನಮತ್ತರಾಗಿರುವುದು ತಪಾಸಣೆ ವೇಳೆ ಗೊತ್ತಾಗಿದ್ದರಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು ಐದು ತಾಸು ವಿಳಂಬವಾಗಿ ಈ ವಿಮಾನ ದುಬೈಗೆ ಪ್ರಯಾಣ ಬೆಳೆಸಿತ್ತು.
ಸ್ಪೈಸ್ ಜೆಟ್ ವಿಮಾನವನ್ನು ಚಲಾಯಿಸಬೇಕಿದ್ದ ಪೈಲಟ್ ಟರ್ಕಿಯವರಾಗಿದ್ದಾರೆಂದು ಹೇಳಲಾಗಿದೆ. ಆಕೆ ಮಾಡಿದ್ದ ಅವಾಂತರದಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಈ ವಿಮಾನವು ಟರ್ಕಿ ದೇಶದ ಕಾರ್ಡೊಲ್ ಕಂಪೆನಿಗೆ ಸೇರಿದ್ದಾಗಿದ್ದು, ಸ್ಪೈಸ್ ಜೆಟ್ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಭಾರತದಲ್ಲಿ ವಿಮಾನ ಹಾರಾಟ ನಡೆಸುತ್ತಿತ್ತು.
ಲೇಡಿ ಪೈಲಟ್ ಅಮಾನತುವಿಮಾನ ಚಲಾಯಿಸಬೇಕಾದ ಲೇಡಿ ಪೈಲಟ್ ಪಾನಮತ್ತರಾಗಿರುವುದು ತಪಾಸಣೆ ವೇಳೆ ಗೊತ್ತಾಗಿದ್ದರಿಂದ ಆಕೆಯನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.
ವೈದ್ಯಕೀಯ ತಪಾಸಣೆಯ ಸಂದರ್ಭದಲ್ಲಿ ಲೇಡಿ ಪೈಲಟ್ ಸೆಬಹತ್ ಉಲ್ಕೊ ಎರ್ಕ್ ಎಂಬವರು ಪಾನಮತ್ತರಾಗಿರುವುದು ದೃಢಪಟ್ಟಿದ್ದರಿಂದ ಆಕೆಯನ್ನು ಅಮಾನತುಗೊಳಿಸಿ ಟಿರ್ಕಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.