ದೇರಳಕಟ್ಟೆ: ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ' ನ್ಯೂಟ್ರಿಕಾನ್ 2018' ರಾಷ್ಟ್ರೀಯ ಸಮ್ಮೇಳನ
ಉಳ್ಳಾಲ, ಜ. 19: ಯಾವುದೇ ರೋಗ ವಾಸಿಯಾಗಲು ಔಷಧಿಯೊಂದಿಗೆ ಪೌಷ್ಟಿಕಾಂಶದ ಆಹಾರದ ಸೇವನೆಯು ಪ್ರಮುಖವಾಗಿದ್ದು, ಶೇಕಡ 5 ರಷ್ಟು ಆಸ್ಪತ್ರೆಗಳು ಮಾತ್ರ ರೋಗ ವಾಸಿ ಮಾಡುವಲ್ಲಿ ಪೌಷ್ಟಿಕಾಂಶಗಳಿಗೆ ಮಹತ್ವ ನೀಡುತ್ತಿದ್ದು ಎಲ್ಲಾ ಆಸ್ಪತ್ರೆಗಳು ಕೂಡ ಇದನ್ನು ಅನ್ವಯಿಸುವಂತಾಗ ಬೇಕೆಂದು ದೇರಳಕಟ್ಟೆ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಎಮ್.ಶಾಂತಾರಾಮ ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ನಿಟ್ಟೆ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ,ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಡಿಪಾರ್ಟ್ಮೆಂಟ್ ಆಫ್ ಡಾಯಟಿಕ್ಸ್ ಆಂಡ್ ನ್ಯೂಟ್ರೀಷಿಯನ್ ವತಿಯಿಂದ ಶುಕ್ರವಾರದಂದು ಕ್ಷೇಮ ಆಡಿಟೋರಿಯಂನಲ್ಲಿ ನಡೆದ ಪೌಷ್ಟಿಕಾಂಶಗಳ ರಾಷ್ಟ್ರೀಯ ಸಮ್ಮೇಳನ "ನ್ಯೂಟ್ರಿಕಾನ್-2018" ಅಂಗವಾಗಿ ಏರ್ಪಡಿಸಿದ್ದ "ವೈದ್ಯಕೀಯ ನಿರ್ವಹಣೆಯಲ್ಲಿ ಪೌಷ್ಟಿಕಾಂಶಗಳ ಪಾತ್ರ" ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶ ಸ್ವತಂತ್ರಗೊಂಡು 70 ವರುಷಗಳಾದರೂ ಇಂದಿಗೂ ಜನರು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಳವಳಕಾರಿ.ಯಾವುದೇ ರೋಗವು ವಾಸಿಯಾಗಲು ಪೌಷ್ಟಿಕಾಂಶವುಳ್ಳ ಆಹಾರ ಸೇವನೆಯು ಅಗತ್ಯ. ಆಸ್ಪತ್ರೆಯ ವತಿಯಿಂದ ರೋಗಿಗಳಿಗೆ ಪೌಷ್ಟಿಕಾಂಶದ ಆಹಾರದ ಬಗ್ಗೆ ತಿಳಿಸುವ ಕಾರ್ಯ ನಡೆಯಬೇಕು. ಮಾರುಕಟ್ಟೆಯಲ್ಲಿ ಸಿಗುವ ನೀರು, ಹಣ್ಣು,ತರಕಾರಿಗಳು ವಿಷಪೂರಿತವಾಗಿದ್ದು, ಘನತೆಯ ದೃಷ್ಟಿಯಲ್ಲಿ ನಾವು ಇದನ್ನು ಬಳಸುವ ಮುಂಚೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ಹೇಳಿದರು.
ಐಡಿಎ ಬೆಂಗಳೂರು ಘಟಕದ ಅಧ್ಯಕ್ಷರಾದ ಡಾ.ಗೀತಾ ಸಂತೋಷ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಯುವ ವಿದ್ಯಾರ್ಥಿಗಳು ಪೌಷ್ಟಿಕಾಂಶ ಆಹಾರದ ಬಗ್ಗೆ ಸಮುದಾಯಕ್ಕೆ ಮಾಹಿತಿ ರವಾಣಿಸುವ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ರೂಪಿಸುವಂತೆ ಕರೆ ನೀಡಿದರು.
ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಢಾರಿ, ಕ್ಷೇಮ ಕಾಲೇಜಿನ ಡೀನ್ ಪ್ರೊ.ಡಾ.ಪಿ.ಎಸ್.ಪ್ರಕಾಶ್, ಸಂಪನ್ಮೂಲ ವ್ಯಕ್ತಿ ಶೈನೀ ಸುರೇಂದ್ರ, ಡಾ. ಇಂದ್ರಾಣಿ ಕರುಣಾಸಾಗರ್, ಕಾರ್ಯಕ್ರಮ ಸಂಯೋಜಕರಾದ ಮೇಜರ್ ಡಾ.ಶಿವಕುಮಾರ್ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.