ಯೆನೆಪೊಯ ವಿವಿಯಲ್ಲಿ ವಿಶ್ವ ಕಿಡ್ನಿ ದಿನಾಚರಣೆ
ಮಂಗಳೂರು,ಮಾ.10: ದೇರಳಕಟ್ಟೆಯ ಯೆನೆಪೊಯ ವಿಶ್ವವಿದ್ಯಾನಿಲಯದ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೂತ್ರರೋಗ ಶಾಸ್ತ್ರ ವಿಭಾಗ ಹಾಗೂ ಮೂತ್ರಪಿಂಡ ಚಿಕಿತ್ಸಾ ವಿಭಾಗಗಳ ಜಂಟಿ ಆಶ್ರಯದಲ್ಲಿ ‘ವಿಶ್ವ ಕಿಡ್ನಿ’ ದಿನವನ್ನು ಗುರುವಾರ ಆಸ್ಪತ್ರೆಯ ಸಭಾಂಗಣದಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಸರಕಾರದ ಕಿಡ್ನಿ ಕಸಿ ಸಂಯೋಜನ ಸಮಿತಿ ಕಾರ್ಯ ಕಾರಿ ಸಮಿತಿ ಸದಸ್ಯ ಡಾ.ಜಿ.ಕೆ. ವೆಂಕಟೇಶ್ ಅಪಘಾತ ಮತ್ತಿತರ ಕಾರಣಗಳಿಂದ ನಿಧನ ಹೊಂದಿದ ದಾನಿಗಳಿಂದ ಪಡೆದ ಅಂಗಾಂಗಳ ಕಸಿಯೇ ರೋಗಿಗಳ ಪಾಲಿಗೆ ಮುಖ್ಯ ಆಶಾ ಕಿರಣವಾಗಿ ಕಾಣುತ್ತದೆ. ಕಿಡ್ನಿ ಕಸಿ ಕುರಿತು ಸಮಾಜದಲ್ಲಿರುವ ಮೂಢ ನಂಬಿಕೆ, ಭ್ರಮೆಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಮಂಗಳೂರಿನ ಯುನಿಟಿ ಹೆಲ್ತ್ ಕಾಂಪ್ಲೆಕ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸಿ.ಪಿ. ಹಬೀಬ್ ರಹ್ಮಾನ್ ಮಾತನಾಡಿ, ಜನಸೇವೆ, ದಾನ ಧರ್ಮ, ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಎಲ್ಲ ಧರ್ಮಗಳೂ ಪ್ರಾಶಸ್ತ್ಯ ನೀಡಿವೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಂಗಾಂಗಗಳನ್ನು ದಾನ ಮಾಡಿದರೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದರು.
ಈ ಸಂದರ್ಭ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ವತಿ ಯಿಂದ ಸಿದ್ಧಪಡಿಸಲಾದ ‘ಯೆನ್ ಆರ್ಗನ್ ಡೊನೆಶನ್ ಕಾರ್ಡ್’ನ್ನು ಬಿಡುಗಡೆ ಮಾಡಲಾಯಿತು. ಮೂತ್ರ ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮುಜೀಬ್ ರಹ್ಮಾನ್ ಹಾಗೂ ಮೂತ್ರಪಿಂಡ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಂತೋಷ್ ‘ಕಿಡ್ನಿ’ ದಿನಾಚರಣೆಯ ಅಂಗವಾಗಿ ಆಸ್ಪತ್ರೆ ಹಾಗೂ ಸಮುದಾಯದಲ್ಲಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರಗಳನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಯೆನೆಪೊಯ ವಿವಿ ಉಪಕುಲಪತಿ ಡಾ.ಎಂ.ವಿಜಯ ಕುಮಾರ್ ಮಾತನಾಡಿ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು ಎಂದರು.
ಯೆನೆಪೊಯ ವಿವಿ ಕುಲಸಚಿವ ಡಾ.ಸಿ. ರಘುವೀರ್, ಯೆನೆಪೊಯ ಮೆಡಿಕಲ್ ಕಾಲೇಜಿನ ಡೀನ್ ಡಾ.ಗುಲಾಮ್ ಜೀಲಾನಿ ಖಾದಿರಿ, ಯುರೋಲೊಜಿ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ನಿಶ್ಚಿತ್ ಡಿಸೋಜ ಮತ್ತು ಅಲ್ತಾಫ್ ಖಾನ್ ವೇದಿಕೆಯಲ್ಲಿ ಉಪಸ್ಥ್ಥಿತರಿದ್ದರು. ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಿಇಒ ಡಾ. ಮುಹಮ್ಮದ್ ಅಮೀನ್ ವಾಣಿ ಸ್ವಾಗತಿಸಿದರು. ವೈದ್ಯಕೀಯ ಸಮಾಜ ಕಾರ್ಯವಿಭಾಗದ ಮುಖ್ಯಸ್ಥ ಡಾ. ಮುಹಮ್ಮದ್ ಗುತ್ತಿಗಾರ್ ವಂದಿಸಿ ದರು. ಯೆನೆಪೊಯ ಮೆಡಿಕಲ್ ಕಾಲೇಜು ಮೈಕ್ರೋಬಯೋಲಜಿ ವಿಭಾಗದ ಡಾ. ರೋಶೆಲ್ ಟೆಲ್ಲಿಸ್ ಕಾರ್ಯಕ್ರಮ ನಿರೂಪಿಸಿದರು.