ಮಡಂತ್ಯಾರು: ರಸ್ತೆ ಅಪಘಾತಕ್ಕೆ ತಾಯಿ-ಮಗು ಮೃತ್ಯು
ಬೆಳ್ತಂಗಡಿ, ಜ. 20: ಮಡಂತ್ಯಾರು ಸಮೀಪ ಲಾರಿ ಹಾಗೂ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ತಾಯಿ - ಮಗು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತರನ್ನು ಮಂಗಳೂರಿನ ಬಜಾಲು ಸಮೀಪದ ನೆಲ್ಲಿಗುಡ್ಡೆ ಜಯನಗರ ನಿವಾಸಿಗಳಾದ ಅರ್ಚನಾ (30) ಹಾಗೂ ಆಕೆಯ ಆರು ತಿಂಗಳ ಮಗು ಎಂದು ಗುರುತಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಅರ್ಚನಾರ ಪತಿ ಜಗದೀಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅವರು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಡಂತ್ಯಾರಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಕಾರು ಹಾಗೂ ಲಾರಿ ಮುಖಾಮುಖಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದ್ದು, ಅಪಘಾತದಿಂದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದವರು ಗಂಭೀರ ವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರ ಸಹಕಾರದಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಆ ವೇಳೆಗೆ ತಾಯಿ ಹಾಗೂ ಮಗು ಮೃತಪಟ್ಟಿತ್ತು ಎಂದು ಹೇಳಲಾಗಿದೆ.
ಜಗದೀಶ್ ಅವರ ಸ್ಥಿತಿಯೂ ಗಂಭೀರವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದ ಬಾಲಕಿಗೂ ಗಂಭೀರ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.