ಕಾರ್ಕಳ: ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾ.ಪಂ. ಸದಸ್ಯನ ದಾಂಧಲೆ
ಅಮಾನುಷವಾಗಿ ವರ್ತಿಸಿದ ವೀಡಿಯೊ ಅಂತರ್ಜಾಲದಲ್ಲಿ ವೈರಲ್
ಕಾರ್ಕಳ, ಜ. 21: ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾ.ಪಂ.ನ ಸದಸ್ಯ ದಾಂಧಲೆ ನಡೆಸಿದ ಘಟನೆ ಅಂತರ್ಜಾಲದಲ್ಲಿ ವೀಡಿಯೊ ವೈರಲ್ ಆಗಿದೆ.
ಮುಂಡ್ಕೂರು ಗ್ರಾ.ಪಂ.ಸದಸ್ಯ ಸೋಮನಾಥ ಪೂಜಾರಿ (36) ಕಾನೂನನ್ನು ಕೈಗೆತ್ತಿಕೊಂಡ ಗ್ರಾ.ಪಂ.ಸದಸ್ಯ ಎಂದು ಗುರುತಿಸಲಾಗಿದೆ. ಆತ ಮುಂಡ್ಕೂರು ಗ್ರಾ.ಪಂ.ಹಾಲಿ ಸದಸ್ಯನಾಗಿದ್ದು, ಅತೀರೇಖವಾಗಿ ವರ್ತಿಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಪಾತ್ರರಾಗಿದ್ದಾರೆ.
ಆಗಿದ್ದೇನು ?
ಕರ್ಫು ಸ್ವಾಮಿ ಹಾಗೂ ಇನ್ನೋರ್ವ ಸೇರಿಕೊಂಡು ಮುಂಡ್ಕೂರು ಗ್ರಾಮದ ಸಂಕಲಕರಿಯ ಎಂಬಲ್ಲಿ ಸರಕಾರಿ ಭೂಮಿಯಲ್ಲಿ ಆವರಣ ಗೋಡೆ ಕಟ್ಟಲು ಮುಂದಾಗಿದ್ದರು. ಅದನ್ನು ಸ್ಥಳೀಯ ಗ್ರಾ.ಪಂ. ಸದಸ್ಯ ಆಕ್ಷೇಪಿಸಿ, ಗ್ರಾ.ಪಂ.ಗೆ ದೂರು ನೀಡಿದ್ದರು. ಪ್ರಕರಣದ ಇತ್ಯರ್ಥಕ್ಕಾಗಿ ಗ್ರಾ.ಪಂ.ಪಿಡಿಒ ಮತ್ತು ಗ್ರಾಮ ಕರಣಿಕರ ತಂಡ ಸ್ಥಳಕ್ಕೆ ಧಾವಿಸಿತ್ತು. ಅದೇ ವೇಳೆ ಗ್ರಾ.ಪಂ.ಸದಸ್ಯ ಮತ್ತು ಸಂಬಂಧಿಸಿದ ಮನೆ ಮಾಲಿಕರ ನಡುವೆ ಮಾತಿನ ಚಕಮಕಿ ನಡೆದು, ಅವಾಚ್ಯ ಶಬ್ದಗಳಿಂದ ಒಬ್ಬರು ಇನ್ನೊಬ್ಬರನ್ನು ನಿಂದಿಸಿದ್ದಾರೆ ಎಂದು ತಿಳಿದುಬಂದಿದೆ.ಈ ಸಂದರ್ಭ ಗ್ರಾ.ಪಂ.ಸದಸ್ಯ ಸೋಮನಾಥ ಪೂಜಾರಿ ಅಕ್ರಮವಾಗಿ ನಿರ್ಮಿಸಿದ ಗೋಡೆಯನ್ನು ತಾನೇ ಸ್ವತಃ ಕೆಡಹುವ ಮೂಲಕ ದರ್ಪ ಮೆರೆದಿದ್ದಾರೆ.
ಅವಕಾಶವಿಲ್ಲ :
ಕಾನೂನು ಪ್ರಕಾರ ಅಕ್ರಮವಾಗಿ ನಿರ್ಮಾಣ ಹಂತದಲ್ಲಿರುವ ಗೋಡೆಯನ್ನು ಸಂಬಂಧಿಸಿದ ಅಧಿಕಾರಿಗಳೇ ಕೆಡಹಬೇಕು. ಆದರೆ ಇಲ್ಲಿ ಮಾತ್ರ ಅಧಿಕಾರಿಗಳ ಸಮ್ಮುಖದಲ್ಲಿ ಈ ಘಟನೆ ನಡೆದು ಹೋಗಿದೆ. ಗ್ರಾ.ಪಂ.ಸದಸ್ಯರು ಗೋಡೆ ತೆರವು ಮಾಡುವಂತಹ ಅಧಿಕಾರ ಇಲ್ಲ ಎನ್ನುತ್ತಾರೆ ಮುಂಡ್ಕೂರು ಗ್ರಾ.ಪಂ. ಪ್ರಭಾರ ಪಿಡಿಒ ಶಂಕರ್. ಈ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲಾಗಿದೆ. ಅಕ್ರಮ ಕಾಮಗಾರಿ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದ ಗ್ರಾ.ಪಂ. ಸದಸ್ಯನ ವಿರುದ್ಧ ಕ್ರಮ ಕೈಗೊಳ್ಳಲು, ಸಂಬಂಧಿಸಿದವರು ದೂರು ನೀಡಬೇಕಾಗುತ್ತದೆ. ಒಂದು ವೇಳೆ ದೂರು ನೀಡಿದ್ದರೆ ಆ ಕ್ರಮವನ್ನು ನಾವು ಕೈಗೊಳ್ಳುತ್ತಿದ್ದೇವು. ಆದರೆ ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ಸುಖಾಂತ್ಯ ಕಂಡಿದೆ ಎನ್ನುತ್ತಾರೆ ಅವರು.
ಅಕ್ರೋಶ :
ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯನೋರ್ವ ಅಮಾನುಷವಾಗಿ ವರ್ತಿಸಿದ ಘಟನೆಯು ಸಾರ್ವಜನಿಕರಲ್ಲಿ ಅಕ್ರೋಶಕ್ಕೆ ಕಾರಣವಾಗಿದೆ. ಸಮಾಜಿಕ ಜಾಲತಾಣದಲ್ಲಿ ಘಟನೆಯ ವಿರುದ್ಧ ಅಸಮಾಧಾನಗಳು ವ್ಯಕ್ತವಾಗಿದ್ದು, ಜನತೆಯಿಂದ ಆರಿಸಿದ ಜನಪ್ರತಿನಿಧಿ ಯಾವ ರೀತಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವುದರ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.