ಉಡುಪಿ ಜಿಲ್ಲೆಯಲ್ಲಿ ಆರು ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆ: ಸಚಿವ ಪ್ರಮೋದ್
ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಆಚರಣೆ
ಉಡುಪಿ, ಜ.26: ಉಡುಪಿ ಜಿಲ್ಲೆಯಲ್ಲಿ ಆರು ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆಗೆ ಮಂಜೂರಾತಿ ದೊರಕಿದ್ದು, ಈ ಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ ಪ್ರತೀ ಶಾಲೆಗೆ ತಲಾ 10 ಲಕ್ಷ ರೂ. ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಬೀಡಿನಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಅವರು ಗಣರಾಜ್ಯೋತ್ಸವದ ಸಂದೇಶ ನೀಡಿದರು.
ರಾಜ್ಯ ಸರಕಾರ ಈ ಸಾಲಿನಲ್ಲಿ ‘ಒಂದು ಬಾರಿ ವೆಚ್ಚವಾಗಿ ಭರಿಸುವ ಯೋಜನೆ’ಯಡಿ ಉಡುಪಿ ಜಿಲ್ಲೆಗೆ 15.40 ಕೋ.ರೂ. ಅನುದಾನಕ್ಕೆ ಮಂಜೂರಾತಿ ನೀಡಿದೆ. ಇದರಲ್ಲಿ 4.82 ಕೋಟಿ ರೂ. ಮೊತ್ತದ ಆರು ಸರಕಾರಿ ಆಸ್ಪತ್ರೆ ಗಳ ಕಟ್ಟಡ ದುರಸ್ತಿ ಮತ್ತು ನಿರ್ಮಾಣ, 60 ಲಕ್ಷ ರೂ. ಮೊತ್ತದ ಆರು ಹೊಸ ಅಂಗನವಾಡಿ ಕಟ್ಟಡಗಳ ನಿರ್ಮಾಣ, 9.63 ಕೋಟಿ ರೂ. ಮೊತ್ತದ 79 ಸರಕಾರಿ ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳುವಂತೆ ಮಂಜೂರಾತಿ ನೀಡಲಾಗಿದೆ ಎಂದರು.
ಪಶ್ಚಿಮ ವಾಹಿನಿ ಯೋಜನೆಯಡಿ 52.60 ಕೋಟಿ ವೆಚ್ಚದ ಕಿಂಡಿ ಅಣೆಕಟ್ಟು / ಉಪ್ಪು ನೀರು ತಡೆ ಅಣೆಕಟ್ಟುಗಳ ನಿರ್ಮಾಣದ ಕ್ರಿಯಾ ಯೋಜನೆ ಅನು ಮೋದನೆಗೊಂಡಿದ್ದು, ಅಂದಾಜು ಪಟ್ಟಿಗಳನ್ನು ಮಂಜೂರಾತಿಗೆ ಸಲ್ಲಿಸಲಾಗಿದೆ. ಮಲ್ಪೆ ಮೀನುಗಾರಿಕಾ ಬಂದರಿನ ಒಂದನೆ ಮತ್ತು ಎರಡನೆ ಹಂತದ ಉತ್ತರ ಭಾಗದ 5 ಕೋಟಿ ರೂ. ವೆಚ್ಚದ ವಿಸ್ತರಣಾ ಕಾಮಗಾರಿಯ ಅಂದಾಜು ಪಟ್ಟಿಗೆ ಅನುಮೋದನೆ ದೊರೆತಿದೆ ಎಂದು ಅವರು ಹೇಳಿದರು.
4,040 ರೂ. ವೆಚ್ಚದಲ್ಲಿ ಅಡುಗೆ ಅನಿಲ ಸಂಪರ್ಕ ಉಚಿತವಾಗಿ ನೀಡುವ ಮುಖ್ಯಮಂತ್ರಿ ಅನಿಲ ಯೋಜನೆಯಡಿ ಜಿಲ್ಲೆಯಲ್ಲಿ ಮೊದಲನೆ ಹಂತದಲ್ಲಿ ನಿಗದಿಪಡಿಸಿದ 11,059 ಫಲಾನುಭವಿಗಳಲ್ಲಿ 10,576 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಹೊಸ ತಾಲೂಕು ಕಚೇರಿ ತೆರೆಯಲು ತಾತ್ವಿಕ ಅನುಮೋದನೆ
ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ಕಾಪು, ಬ್ರಹ್ಮಾವರ, ಬೈಂದೂರು, ಹೆಬ್ರಿ ತಾಲೂಕುಗಳನ್ನು ರಚನೆ ಮಾಡಿ ಹೊಸ ತಾಲೂಕು ಕಚೇರಿಗಳನ್ನು ತೆರೆಯಲು ಸರಕಾರ ತಾತ್ವಿಕ ಅನುಮೋದನೆ ನೀಡಿದೆ. ಪ್ರಥಮ ಹಂತದಲ್ಲಿ ಹೊಸ ತಾಲೂಕು ಕಚೇರಿಗೆ ಅಗತ್ಯವಿರುವ ಒಟ್ಟು 17 ಅಧಿಕಾರಿ/ಸಿಬ್ಬಂದಿ ಹುದ್ದೆಯನ್ನು ಸೃಷ್ಟಿಸಿ ಆದೇಶ ಹೊರಡಿಸಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಿಗಿ, ಅಪರ ಜಿಲ್ಲಾಧಿಕಾರಿ ಅನುರಾಧಾ, ಜಿಪಂ ಸಿಇಓ ಶಿವಾನಂದ ಕಾಪಶಿ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಮೊದಲಾದವರು ಉಪಸ್ಥಿತರಿದ್ದರು.