ಸೌಹಾರ್ದಕ್ಕೆ ಧಕ್ಕೆ ತರುವ ರಾಜಕಾರಣವನ್ನು ಸೋಲಿಸಿ: ವಿನೋದ್ ಕ್ರಾಸ್ತ
ಕುಂದಾಪುರ, ಜ.29: ಮತೀಯವಾದ, ಕೋಮುವಾದವು ರಾಜಕೀಯ ಲಾಭ ಪಡೆಯಲು ಹವಣಿಸುತ್ತಿರುವ ಇಂದಿನ ಸಂದರ್ಭದಲ್ಲಿ ಸೌಹಾರ್ದಕ್ಕೆ ಧಕ್ಕೆ ತರುವ ರಾಜಕಾರಣವನ್ನು ಸೋಲಿಸಬೇಕಾಗಿದೆ. ಆದುದರಿಂದ ಸೌಹಾರ್ದಕ್ಕೆ ರಾಜಕಾರಣ ಮುಂದಾಗಬೇಕಾಗಿದೆ ಎಂದು ಸೌಹಾರ್ದತೆಗಾಗಿ ಕರ್ನಾಟಕ ವೇದಿಕೆಯ ಸಂಚಾಲಕ ವಿನೋದ ಕ್ರಾಸ್ತ ಹೇಳಿದ್ದಾರೆ.
ಸೌಹಾರ್ದತೆಗಾಗಿ ಕರ್ನಾಟಕ ಇದರ ವತಿಯಿಂದ ಜ.30ರಂದು ನಡೆಯುವ ಮಾನವ ಸರಪಳಿಯ ಪ್ರಚಾರ ಜಾಥಾಕ್ಕೆ ಸೋಮವಾರ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವೇದಿಕೆ ಮುಖಂಡ ರಾಜೀವ ಕೋಟ್ಯಾನ್ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ನಮ್ಮ ಹಿರಿಯರು ಕಾಪಾಡಿಕೊಂಡು ಬಂದಿದ್ದಾರೆ. ಅಂತಹ ಪರಂಪರೆಯನ್ನು ಗಟ್ಟಿಗೊಳಿಸಲು ಎಲ್ಲಾ ಮತ ಧರ್ಮದವರು ಒಂದಾಗಿ ಮಾನವ ಸರಪಳಿ ಮೂಲಕ ಸಂದೇಶ ಸಾರುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಈ ಸಂದರ್ಭ ಬಾಲಕೃಷ್ಣ ಕೆ.ಎಂ., ಲಕ್ಷ್ಮಣ ಬರೆಕಟ್ಟು, ರಾಜು ವಾಡಿಗ, ರಮೇಶ್ ವಿ., ಮಂಜುನಾಥ ಶೋಗನ್ ಮೊದಲಾದವರು ಉಪಸ್ಥಿತರಿದ್ದರು. ಸಮಿತಿಯ ಸಂಚಾಲಕ ಎಚ್.ನರಸಿಂಹ ಸ್ವಾಗತಿಸಿದರು. ಸುರೇಶ್ ಕಲ್ಲಾಗರ ವಂದಿಸಿದರು