ಪಿಲಾತಬೆಟ್ಟು: ಕಾರು ಢಿಕ್ಕಿ; ಗಂಭೀರ ಗಾಯಗೊಂಡ ಮಗು ಮೃತ್ಯು
ರಸ್ತೆ ಬದಿ ನಿಂತಿದ್ದ ತಾಯಿ-ಮಗು
ಬಂಟ್ವಾಳ, ಫೆ. 7: ರಸ್ತೆ ಬದಿ ನಿಂತಿದ್ದ ತಾಯಿ-ಮಗುವಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಮಗು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಎಂಬಲ್ಲಿ ನಡೆದಿದೆ.
ಮಂಗಳೂರು ಹೊರವಲಯದ ವಾಮಂಜೂರು ನಿವಾಸಿ ಲೋಹಿತಾಕ್ಷ ಹಾಗೂ ಪ್ರಮೀಳಾ ದಂಪತಿಯ ಪುತ್ರಿ ವೈಷ್ಣವಿ (3) ಮೃತ ಮಗು ಎಂದು ಗುರುತಿಸಲಾಗಿದೆ. ಪ್ರಮೀಳಾ (26) ಗಾಯಗೊಂಡಿದ್ದಾರೆ.
ಮಂಗಳವಾರ ರಾತ್ರಿ ಮೂರ್ಜೆ ಸಮೀಪದ ಮಣ್ಣೂರುವಿನಲ್ಲಿ ಸಂಬಂಧಿಕರೊಬ್ಬರ ಖಾಸಗಿ ಕಾರ್ಯಕ್ರಮಕ್ಕೆ ಪ್ರಮೀಳಾ ಮತ್ತು ವೈಷ್ಣವಿ ತೆರಳಿದ್ದರು. ವಾಮಂಜೂರಿಗೆ ತೆರಳಲು ರಸ್ತೆ ಬದಿ ನಿಂತಿದ್ದ ಸಂದರ್ಭ ಕಾವಳಕಟ್ಟೆ ಕಡೆಯಿಂದ ಬಂದ ಕಾರೊಂದು ತಾಯಿ, ಮಗುವಿಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಮತ್ತೆ ಮುನ್ನುಗ್ಗಿದ ಕಾರು ರಸ್ತೆ ಬದಿ ನಿಲ್ಲಿಸಿದ್ದ 5-6 ದ್ವಿಚಕ್ರ ವಾಹನಗಳಿಗೂ ಢಿಕ್ಕಿ ಹೊಡೆದಿದೆ.
ಅಪಘಾತದಿಂದ ಗಂಭೀರ ಗಾಯಗೊಂಡ ಇವರಿಬ್ಬರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ತಡರಾತ್ರಿ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣ್ಣೂರಿನ ಸುರೇಶ್ ಎಂಬವರು ಬುಧವಾರ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಾಲಕ ಪುಂಜಾಲಕಟ್ಟೆ ನಿವಾಸಿ ಮೊಯ್ದಿನ್ ಸಾಹೇಬ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.