ಕಣ್ಣೂರು: ಯುವ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ
ಕಾಸರಗೋಡು, ಫೆ.13: ಕಣ್ಣೂರು ಮಟ್ಟನ್ನೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ತಂಡವೊಂದು ಬಾಂಬೆಸೆದು ಬಳಿಕ ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಕೊಲೆಗೀಡಾದವರನ್ನು ಯುವ ಕಾಂಗ್ರೆಸ್ ಮಟ್ಟನ್ನೂರು ಬ್ಲಾಕ್ ಕಾರ್ಯದರ್ಶಿ ಶುಹೈಬ್(30) ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ಶುಹೈಬ್ ಜೊತೆಗಿದ್ದ ನಾಲ್ವರು ಗಾಯಗೊಂಡಿದ್ದಾರೆ.
ವ್ಯಾನ್ ನಲ್ಲಿ ಬಂದ ತಂಡ ಈ ಕೃತ್ಯ ನಡೆಸಿದೆ. ರಸ್ತೆ ಬದಿಯ ಗೂಡಂಗಡಿಯಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭದಲ್ಲಿ ಶುಹೈಬ್ ಮೇಲೆ ಮೊದಲು ಬಾಂಬ್ ಎಸೆದ ತಂಡ ಬಳಿಕ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಈ ಸಂದರ್ಭ ಶುಹೈಬ್ ಜೊತೆಗಿದ್ದ ನಾಲ್ವರು ಗೆಳೆಯರ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡಿರುವ ನೌಶಾದ್(29), ರಿಯಾಝ್(28) ಎಂಬವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲ ದಿನಗಳ ಹಿಂದೆ ಎಡಯನ್ನೂರು ಎಂಬಲ್ಲಿ ಎಸ್.ಎಫ್.ಐ. ಮತ್ತು ಕಾಂಗ್ರೆಸ್ ನ ವಿದ್ಯಾರ್ಥಿ ಸಂಘಟನೆಯಾದ ಕೆ.ಎಸ್.ಯು. ನಡುವೆ ಘರ್ಷಣೆ ನಡೆದಿತ್ತು. ಈ ದ್ವೇಷವೇ ಘಟನೆಗೆ ಕಾರಣ ಎಂಬ ಆರೋಪ ಕೇಳಿಬರುತ್ತಿದೆ.
ಕೃತ್ಯವನ್ನು ಖಂಡಿಸಿ ಯು.ಡಿ.ಎಫ್. ಇಂದು ಕಣ್ಣೂರು ಜಿಲ್ಲೆಯಲ್ಲಿ ಹರತಾಳಕ್ಕೆ ಕರೆ ನೀಡಿದೆ.
ಸ್ಥಳದ್ಲಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.