ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಖ್ಯಾತ ನಟ ಮೋಹನ್ಲಾಲ್ ಭೇಟಿ
ಸುಬ್ರಹ್ಮಣ್ಯ, ಫೆ. 15: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಲೆಯಾಳಂನ ಖ್ಯಾತ ನಾಯಕ ನಟ, ಸೂಪರ್ಸ್ಟಾರ್ ಮೋಹನಲಾಲ್ ಗುರುವಾರ ಭೇಟಿ ನೀಡಿದರು.
ಇಲ್ಲಿನ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರು ಮೋಹನಲಾಲ್ ರಿಗೆ ಶಾಲು ಹೊದಿಸಿ, ಪ್ರಸಾದ ನೀಡಿ ಹರಸಿದರು. ಬಳಿಕ ಅವರು ಹೊಸಳಿಗಮ್ಮ ದೇವಿಯ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.
ಅವರನ್ನು ಕುಕ್ಕೆ ಕ್ಷೇತ್ರದ ಮಾಸ್ಟರ್ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಸುಧೀರ್ಕುಮಾರ್ ಶೆಟ್ಟಿ, ದೇವಸ್ಥಾನದ ಶಿಷ್ಠಾಚಾರ ಅಧಿಕಾರಿ ಕೆ.ಎಂ. ಗೋಪಿನಾಥನ್ ನಂಬೀಶ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಧನುಶ್, ರಧೀಶ್, ಪ್ರವೀಣ್ ಗೌಡ, ನೆಟ್ಟಣ, ವಿನೋದ್ ಕಡಬ, ಮಿಥುನ್ ನೆಟ್ಟಣ ಮೊದಲಾದವರು ಉಪಸ್ಥಿತರಿದ್ದರು.
ಕಳೆದ ಒಂದು ವಾರದಿಂದ ಕಡಬ ಸಮೀಪದ ಪದವಿನ ಉರುಂಬಿಯ ಕುಮಾರಧಾರ ನದಿ ತೀರದಲ್ಲಿ ಮಲೆಯಾಳಂ ಚಲನಚಿತ್ರ ಕಾಯಂಕುಳಂ ಕೊಚ್ಚುಣ್ಣಿಯ ಶೂಟಿಂಗ್ಗಾಗಿ ಕುಕ್ಕೆಯ ವಿಜಯ ಕಂಫರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಕೊಲ್ಯ ಕಟ್ಟದ ಕುಮಾರಧಾರ ನದಿ ತೀರದಲ್ಲಿ ಒಂದು ವಾರ ಶೂಟಿಂಗ್ ನಡೆಯಲಿದೆ. ಮಲೆಯಾಳಂ ಚಲನಚಿತ್ರದ ಮತ್ತೋರ್ವ ಮೇರು ನಟ ಮಮ್ಮುಟ್ಟಿ ಕೂಡಾ ಕುಕ್ಕೆಯ ವಿಜಯ ಕಂಫರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರೂ ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿದ್ದಾರೆ. ಮಮ್ಮುಟ್ಟಿ ಕಡಬದ ಕೊಲದಲ್ಲಿ ನಡೆಯುತ್ತಿರುವ ಹೊಸ ಸಿನೆಮಾದ ಶೂಟಿಂಗ್ಗಾಗಿ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ದಾರೆ.