ಭಿನ್ನ ಸಾಮರ್ಥ್ಯದ ಮಕ್ಕಳ ಅಭಿವೃದ್ಧಿಗೆ ಕೈ ಗೊಳ್ಳುವ ಯೋಜನೆಗೆ ಕೇಂದ್ರ ಸರಕಾರದ ಬೆಂಬಲ -ಅನಂತ್ ಕುಮಾರ್ ಹೆಗಡೆ
ಮಂಗಳೂರು, ಫೆ.17: ಮಾನಸಿಕ ಹಾಗೂ ದೈಹಿಕ ಸಮಸ್ಯೆ ಹೊಂದಿರುವ ಭಿನ್ನ ಸಾಮರ್ಥ್ಯದ ಮಕ್ಕಳ ಅಭಿವೃದ್ಧಿಗೆ ಕೈಗೊಳ್ಳುವ ಯೋಜನೆಗೆ ಕೇಂದ್ರ ಸರಕಾರದ ಬೆಂಬಲ ನೀಡಲು ಸಿದ್ಧವಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಶೀಲತೆ ಸಚಿವ ಅನಂತ್ ಕುಮಾರ್ ಹೆಗಡೆ ತಿಳಿಸಿದರು.
ನಗರದ ಚೇತನ ಬಾಲ ವಿಕಾಸ ಕೇಂದ್ರದ ಬೆಳ್ಳಿ ಹಬ್ಬ ವರ್ಷಾಚರಣೆಯ ಸಮಾರಂಭವನ್ನು ಅವರು ಇಂದು ನಗರದ ಪುರಭವನದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ನಮ್ಮ ನಡುವೆ ಈ ರೀತಿಯ ಭಿನ್ನ ಸಾಮರ್ಥ್ಯದ ವಿಶೇಷ ಮಕ್ಕಳು ಶೇ 2ರಷ್ಟಿದ್ದಾರೆ. ಅವರು ಬಾಲ್ಯದಲ್ಲಿ ತಂದೆ ತಾಯಿಯ ಆಸರೆಯಲ್ಲಿ ಇರುತ್ತಾರೆ. ಬಳಿಕ ಅವರಿಗೆ ಆಸರೆ ಬೇಕಾಗುತ್ತದೆ. ಈ ಹೊಣೆಯನ್ನು ಸರಕಾರ ಹೊತ್ತು ಕೊಳ್ಳಬೇಕಾದರೂ ಯಾರೂ, ಹೇಗೆ ಎನ್ನುವ ಬಗ್ಗೆ ಯೋಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅವರ ಬಾಳಿಗೆ ಬೆಳಕಾಗಿರುವ ಸೇವಾ ಸಂಸ್ತೆಗಳಿಗೆ ಭಾರತ ಸರಕಾರ ಬೆಂಬಲ ನೀಡಲು ಸಿದ್ಧವಿದೆ .ಬೆಳಕನ್ನೇ ಕಾಣದ ಜನರ ಬದುಕಿನಲ್ಲಿ ಬೆಳಕಾಗುವ ರೀತಿಯಲ್ಲಿ ಸೇವೆ ಮಾಡಿ, ಅವರ ಬದುಕಿನ ಕೊರತೆಯನ್ನು ಸವಾಲಾಗಿ ಸ್ವೀಕರಿಸಬೇಕಾಗಿದೆ ಎಂದು ಅನಂತ್ ಕುಮಾರ್ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಾ ನಮ್ಮ ಸಮಾಜದಲ್ಲಿ ಒಂದು ಹುಟ್ಟಿನಿಂದ ಬಂದ ದೈಹಿಕ ನ್ಯೂನತೆಯಾದರೆ ಇನ್ನೊಂದು ನಮ್ಮ ದುರಾಸೆಯಿಂದ ವಿಜ್ಞಾನದ ಬೆಳವಣಿಗೆಯ ದುರ್ಬಳಕೆಯಿಂದ ಹಲವು ನ್ಯೂನತೆಯಿಂದ ಬಳಲುವವರು ಇದ್ದಾರೆ. ಅವರ ಏಳಿಗೆಗಾಗಿ ದುಡಿಯುತ್ತಿರುವ ಸಂಸ್ಥೆಯ ಸೇವಾ ವೃತಿಗಳನ್ನು ಗೌರವಿಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಸಮಾರಂಭದಲ್ಲಿ ಶ್ರೀ ರಾಮಕೃಷ್ಣ ಮಠದ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಆರ್ಶೀವಚನ ನೀಡಿದರು. ಸಮಾರಂಭದಲ್ಲಿ ಸಂಸ್ಥೆಗೆ ಸಹಕಾರ ನೀಡುತ್ತಿರುವ ನಗರಶ್ರೀ ನಾರಾಯಣ ಶೆಣೈ, ಕೊಂಚಾಡಿ ಗೊಪಾಲ ಕೃಷ್ಣ ಶೆಣೈ, ಕೆ.ಪಿ.ವಾಸುದದೇವ ರಾವ್,ದಿನೇಶ್ ಮೊದಾಲಾದವರನ್ನು ಸನ್ಮಾನಿಸಲಾಯಿತು.
ನಿಟ್ಟೆ ಡೀಮ್ಡ್ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಸತೀಶ್ ಕುಮಾರ್ ಭಂಡಾರಿ, ಉದ್ಯಮಿ ಮುಕುಂದ ಕಾಮತ್, ಟ್ರಸ್ಟಿ ಸುಮಿತ್ರಾ ಶೆಣೈ ,ಮುಖ್ಯಶಿಕ್ಷಕಿ ಸುಪ್ರಿತಾ ಎಚ್.ಎಂ ಮೊದಲಾದವರು ಉಪಸ್ಥಿತರಿದ್ದರು.