ರಾಮಕೃಷ್ಣ ಮಿಷನ್ನಿಂದ ಶ್ರಮದಾನ
ಮಂಗಳೂರು, ಫೆ. 18: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 16ನೆ ಶ್ರಮದಾನ ರವಿವಾರ ಅತ್ತಾವರದಲ್ಲಿ ನಡೆಯಿತು.
ಮುಂಜಾನೆ 7:30 ಕ್ಕೆ ಕೆಎಂಸಿ ಆಸ್ಪತ್ರೆಯ ಹಿರಿಯ ಮ್ಯಾನೇಜರ್ ಶ್ರೀ ರವಿರಾಜ್, ಹಾಗೂ ಅನಿರುದ್ಧ ನಾಯಕ್ 16ನೆ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಚ್ಛತೆಯ ಕುರಿತು ಚುಟುಕಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರೇಸಿ ಲೋಬೊ, ಇಮ್ತಿಯಾಝ್ ಅಹ್ಮದ್, ನಝೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.
ಸ್ವಯಂ ಸೇವಕರು ಅತ್ತಾವರ ಕಟ್ಟೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಬಿದ್ದಿದ್ದ ಕಸ, ತ್ಯಾಜ್ಯಗಳನ್ನು ಹೆಕ್ಕಿ ಗುಡಿಸಿ ಸ್ವಚ್ಛಗೊಳಿಸಿದರು. ಕೆಎಂಸಿ ಆಸ್ಪತ್ರೆಯ ಸಿಬ್ಬಂದಿಗಳು ಡಾ. ಸಿಂಧು ಸುರೇಂದ್ರ ಜೊತೆಗೂಡಿ ಅತ್ತಾವರ ಕಟ್ಟೆಯಿಂದ ಕೆಎಂಸಿ ಸಾಗುವ ಮುಖ್ಯ ರಸ್ತೆಯನ್ನು ಸ್ವಚ್ಛಗೊಳಿಸಿದರು. ಎಸ್.ಎಂ. ಕುಶೆ ಶಾಲೆಯ ವಿದ್ಯಾರ್ಥಿಗಳು ಅಧ್ಯಾಪಕ ಪ್ರತಿಮ ಕುಮಾರ್ ಮಾರ್ಗದರ್ಶನದಲ್ಲಿ ಎಸ್.ಎಂ. ಕುಶೆ ಶಾಲೆಯತ್ತ ಸಾಗುವ ಮಾರ್ಗ ಹಾಗೂ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿದರು. ಅನಿಲ್ ಕುಮಾರ್ ಅತ್ತಾವರ ಹಾಗೂ ಸ್ಥಳೀಯ ನಾಗರಿಕರು ರೈಲ್ವೇ ನಿಲ್ದಾಣದತ್ತ ಸಾಗುವ ಮಾರ್ಗವನ್ನು ಹಾಗೂ ಅಕ್ಕಪಕ್ಕದ ಜಾಗಗಳಲ್ಲಿ ಸ್ವಚ್ಛತೆ ನಡೆಸಿದರು.
ಸಾಮಾಜಿಕ ಕಾರ್ಯಕರ್ತ ಸೌರಜ್ ಮಂಗಳೂರು ನೇತೃತ್ವದಲ್ಲಿ ಅನಧಿಕೃತ ಬ್ಯಾನರ್, ಪೋಸ್ಟರ್ಗಳನ್ನು ತೆರವುಗೊಳಿಸುವ ಕಾರ್ಯ ನಡೆಯಿತು. ಅಧ್ಯಾಪಕಿ ಪ್ರಜ್ಞಾಶ್ರೀ ಮತ್ತು ಎಸ್ ಎಂ ಕುಶೆ ಶಾಲಾ ವಿದ್ಯಾರ್ಥಿಗಳು ವೈದ್ಯನಾಥ ನಗರದ ಮನೆಮನೆಗಳಿಗೆ ತೆರಳಿ ಸ್ವಚ್ಛತೆಯ ಕುರಿತ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಿ ಸಾರ್ವಜನಿಕರು ತಮ್ಮ ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿಸಿರಿಸಿಕೊಳ್ಳುವಂತೆ ಮನವಿ ಮಾಡಿದರು.
ನಗರದ ಹಲವೆಡೆ ಜನರು ಇನ್ನೂ ತ್ಯಾಜ್ಯವನ್ನು ರಸ್ತೆಯ ಬದಿ ಹಾಕುತ್ತಿರುವುದರಿಂದ ನಗರ ಸೌಂದರ್ಯಕ್ಕೆ ಧಕ್ಕೆ ಬರುತ್ತಿದೆ. ಅದನ್ನು ಪರಿಹರಿಸಬೇಕೆಂಬ ನಿಟ್ಟಿನಲ್ಲಿ ಸ್ವಚ್ಛ ಮಂಗಳೂರು ಸ್ವಯಂ ಸೇವಕರು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಅತ್ತಾವರ ಸೆಂಟರ್ ಎದುರಿನ ಕಾಲುದಾರಿಯಲ್ಲಿ ಕೆಲವು ಜನ ತ್ಯಾಜ್ಯವನ್ನು ಹಾಕುವ ಪರಿಣಾಮ ಜನರು ಫುಟ್ಪಾಥ್ನ್ನು ಬಳಸಲಾಗುತ್ತಿರಲಿಲ್ಲ. ಇಂದು ಅಶೋಕ ಸುಬ್ಬಯ್ಯ, ದೀಪಕ ಮೇಲಂಟ ಹಾಗೂ ಸ್ವಚ್ಛ ಮಂಗಳೂರು ಕಾರ್ಯಕರ್ತರು ಅಲ್ಲಿ ಹಲವು ದಿನಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆಗೆದು ಕಾಲುದಾರಿ ಕಣ್ಣಿಗೆ ಕಾಣುವಂತೆ ಮಾಡಿದರು.
ಅಲ್ಲದೇ ಅದರ ಇನ್ನೊಂದು ಭಾಗದಲ್ಲಿ ಆಗಾಗ ಎತ್ತರ ಪ್ರದೇಶದ ಮಣ್ಣು ಜರಿದು ಯಾವಾಗಲೂ ಪುಟ್ಪಾಥ್ ಮೇಲೆ ಬೀಳುತ್ತಿತ್ತು. ತತ್ಪರಿಣಾವ ಕಾಲುದಾರಿ ನಿಷ್ಪ್ರಯೋಜಕವಾಗುತ್ತಿತ್ತು. ಮಣ್ಣು ಜರಿದು ಬೀಳದಂತೆ ಇಂದು ಅದಕ್ಕೆ ಗಟ್ಟಿಯಾಗಿ ಕಲ್ಲಿನ ತಡೆಗೋಡೆಯನ್ನು ಕಟ್ಟಿ, ಮಣ್ಣುಕಲ್ಲುಗಳನ್ನು ತೆಗೆದು ಪಾದಚಾರಿಗಳಿಗೆ ಹಾಗೂ ಬಸ್ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಯಿತು.ಅಲ್ಲದೆ, ಅಂದಗಾಣಿಸಲಿಕ್ಕಾಗಿ ಒಂದಿಷ್ಟು ಹೂಕುಂಡಗಳನ್ನಿಡಲಾಯಿತು. ಮುಂದಿನ ವಾರ ಕುಳಿತುಕೊಳ್ಳಲು ಸರಳ ಬೆಂಚುಗಳನ್ನು ಅಳವಡಿಸಲು ಚಿಂತಿಸಲಾಗಿದೆ.
ಲಕ್ಷ್ಮಣ ಕುಂದರ್, ಅಫ್ಝಲ್, ಸತೀಶ್ ಭಟ್, ಕೆಎಂಸಿ ಆಸ್ಪತ್ರೆಯ ಸುಮಾರು 70 ಸಿಬ್ಬಂದಿ ಸೇರಿದಂತೆ ಅನೇಕರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಸ್ವಚ್ಛತಾ ಕಾರ್ಯದ ಬಳಿಕ ಕಾರ್ಯಕರ್ತರಿಗೆ ಶ್ರೀ ಚಕ್ರಪಾಣಿ ದೇವಸ್ಥಾನದಲ್ಲಿ ಚಹಾ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಅಕ್ಷಿತ್ ಅತ್ತಾವರ ಅಭಿಯಾನವನ್ನು ಸಂಯೋಜಿಸಿದರು. ಈ ಅಭಿಯಾನಕ್ಕೆ ಎಂಆರ್ಪಿಎಲ್ ಹಾಗೂ ನಿಟ್ಟೆ ಸಂಸ್ಥೆಗಳು ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.
ಸ್ವಚ್ಛ ಗ್ರಾಮ ಅಭಿಯಾನ
ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 100 ಗ್ರಾಮಗಳಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ ನಡೆಸುತ್ತಿದೆ. ಪುತ್ತೂರು, ಮಂಜನಾಡಿ, ಕಾಯರ್ತಡ್ಕ, ಅತಿಕಾರಿಬೆಟ್ಟು ಸೋಮೇಶ್ವರ, ಮೇರ್ಲಪದವು, ಕಿನ್ಯಾ, ಉಳ್ಳಾಲ, ಮಲ್ಲೂರು, ಉಳಾಯಿಬೆಟ್ಟು, ಬಜ್ಪೆ, ಮೆನ್ನಬೆಟ್ಟು, ವಾಲ್ಪಾಡಿ ಸೇರಿದಂತೆ ಹಲವೆಡೆ ಸ್ವಚ್ಛ ಗ್ರಾಮ ಅಭಿಯಾನ ಜರಗಿತು. ಸ್ವಚ್ಛ ಭಾರತ ಮಿಷನ್ ದಕ ಜಿಲ್ಲಾ ಸಂಯೋಜಕಿ ಮಂಜುಳಾ, ನವೀನ ಕೊಣಾಜೆ ಹಾಗೂ ಮಹೇಶ್ ಕೊಲ್ಯ ಸ್ವಚ್ಛ ಗ್ರಾಮ ಅಭಿಯಾನವನ್ನು ಸಂಯೋಜಿಸಿದರು.