ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರಗೈದು ವಂಚನೆ : ಆರೋಪಿಗೆ ಜೈಲು ಶಿಕ್ಷೆ, 10 ಸಾವಿರ ರೂ. ದಂಡ
ಮಂಗಳೂರು, ಫೆ. 19: ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರಗೈದು ವಂಚಿಸಿದ ಅಪರಾಧಿಗೆ ಮಂಗಳೂರು 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು 50 ದಿನ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಲಾಡಿ ಪ್ರಾಂತ್ಯ ಜ್ಯೋತಿನಗರ ನಿವಾಸಿ ಸತೀಶ್ (26) ಶಿಕ್ಷೆಗೊಳಗಾದ ಅಪರಾಧಿ. 10 ಸಾವಿರ ರೂ. ದಂಡದ ಮೊತ್ತದಲ್ಲಿ 5 ಸಾವಿರ ರೂ. ಹಾಗೂ ಹೆಚ್ಚುವರಿಯಾಗಿ 15 ಸಾವಿರ ರೂ. ಸೇರಿದಂತೆ ಒಟ್ಟು 20 ಸಾವಿರ ರೂ. ಸಂತ್ರಸ್ತೆಗೆ ಪರಿಹಾರ ನೀಡಬೇಕು. ತಪ್ಪಿದಲ್ಲಿ ಮತ್ತೆ 1 ತಿಂಗಳ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.
ಸತೀಶನಿಗೆ ಕಡಂದಲೆಯ 22 ವರ್ಷ ವಯಸ್ಸಿನ ಯುವತಿಗೆ ಮೊಬೈಲ್ ಮೂಲಕ ಪರಿಚಯವಾಗಿತ್ತು. 2014 ಡಿ. 17ರಂದು ಯುವತಿ ಚಿಕ್ಕಮ್ಮನ ಮನೆಗೆ ಹೋಗಿ ಹಿಂತಿರುಗುತ್ತಿದ್ದಾಗ ಬೈಕ್ನಲ್ಲಿ ಬಂದಿದ್ದ ಸತೀಶ ಮನೆಗೆ ಬಿಡುವುದಾಗಿ ಹೇಳಿ ಆಕೆಯನ್ನು ಬೈಕ್ನಲ್ಲಿ ಕುಳ್ಳಿರಿಸಿ ಮನೆಯ ಬಳಿಯ ಗದ್ದೆಗೆ ಕರೆದೊಯ್ದು ವಿವಾಹವಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ್ದನೆಂದು ಆರೋಪಿಸಲಾಗಿತ್ತು.
ಯುವತಿಯನ್ನು ವಿವಾಹವಾಗದೆ ವಂಚಿಸಿ ಬೇರೊಬ್ಬಳು ಯುವತಿ ಜತೆ ವಿವಾಹವಾಗಿದ್ದ. ಈ ಬಗ್ಗೆ ಸಂತ್ರಸ್ತೆ 2015 ಜು.11ರಂದು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸತೀಶನನ್ನು ಬಂಧಿಸಿದ್ದರು. ಮೂಡುಬಿದಿರೆ ಪೊಲೀಸ್ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
40 ದಿನ ನ್ಯಾಯಾಂಗ ಬಂಧನದಲ್ಲಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ. ಇದೀಗ ನ್ಯಾಯಾಲಯವು ಪ್ರಕಟಿಸಿದ ಶಿಕ್ಷೆಯಲ್ಲಿ 40 ದಿನ ಕಳೆದು 10 ದಿನ ಶಿಕ್ಷೆ ಅನುಭವಿಸಬೇಕಾಗಿದೆ. ಸರಕಾರರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಒ.ಎಂ.ಕ್ರಾಸ್ತಾ ವಾದಿಸಿದ್ದರು.